ಮೂವರು ಔಟ್; ಸೋಮಣ್ಣ, ಬೊಮ್ಮಾಯಿ ಬಿಜೆಪಿ ಬಿಡೋಲ್ಲ
ಬೆಂಗಳೂರು, ಏ.4: ಬಿಜೆಪಿ ಟೇಕ್ ಕೇರ್ ಸರಕಾರದ ವಸತಿ ಸಚಿವ ವಿ ಸೋಮಣ್ಣ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಲ್ಲೇ ಉಳಿಯುವುದು confirm ಆಗಿದೆ. ಇದರೊಂದಿಗೆ ಯಡಿಯೂರಪ್ಪ ಅವರ ಪರಮಾಪ್ತ ಇಬ್ಬರೂ ಸಚಿವರು ಕೆಜೆಪಿ ಸೇರ್ಪಡೆ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಸಂಬಂಧ ಸೋಮಣ್ಣ ಅವರು ಅಶೋಕ್ ಮತ್ತು ಅನಂತ್ ಕುಮಾರ್ ಜತೆಗೂಡಿ ಇಂದು ಪತ್ರಿಕಾಗೋಷ್ಠಿ ನಡೆಸಲಿದ್ದು, ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಬಹಿರಂಗಗೊಳಿಸಲಿದ್ದಾರೆ.
ರಾಜೂಗೌಡ -ರಾಮಚಂದ್ರ ಇಂದು ಹೈಜಂಪ್: ಈ ಮಧ್ಯೆ, ಬಿಜೆಪಿ ಮಾಜಿ ಸಚಿವ, ಸುರಪುರ ಶಾಸಕ ರಾಜೂಗೌಡ ಅವರು ಇಂದು ಜೆಡಿಎಸ್ ನತ್ತ ಜಿಗಿಯುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಅವರು ಇಂದು ಕೆಜೆಪಿ ಸೇರುವುದು ನಿಕ್ಕಿಯಾಗಿದೆ. ಹಾಗೆಯೇ ಆನಂದ್ ಸಿಂಗ್ ಬಿಜೆಪಿಗೆ ಗುಡ್ ಬೈ ಹೇಳುವುದು ಪಕ್ಕಾ ಆಗಿದ್ದು, ಪಕ್ಷೇತರರಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನನಗೆ ಅಧಿಕಾರ ಮತ್ತು ಸ್ಥಾನಮಾನ ಕೊಟ್ಟಿದೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಒಳ್ಳೆಯ ನಾಯಕರು ಎಂದು ಹೇಳಿದ್ದೇನೆಯೇ ಹೊರತು ಎಲ್ಲಿಯೂ ಕೆಜೆಪಿಗೆ ಹೋಗುತ್ತೇನೆ ಎಂದು ಹೇಳಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಆದರೆ ಮೇಲ್ಮನೆ ಸದಸ್ಯರಾಗಿರುವ ಸೋಮಣ್ಣ ಅವರ ಅಧಿಕಾರಾವಧಿ ಇನ್ನೂ 3 ವರ್ಷವಿದೆ. ಹಾಗಾಗಿ ವಿಧಾನಸಭೆ ಚುನಾವಣೆಯಗೆ ಸ್ಪರ್ಧಿಸದಿರುವ ಬಗ್ಗೆಯೂ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಈ ಎಲ್ಲ ಗೊಂದಲಗಳಿಗೆ ಅವರು ಸುದ್ದಿಗೋಷ್ಠಿಯಲ್ಲಿ ತೆರೆ ಎಳೆಯುವ ನಿರೀಕ್ಷೆಯಿದೆ.
ಮತ್ತೊಂದೆಡೆ ಸಚಿವ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿ ಪಕ್ಷದಿಂದಲೇ ವಿಧಾನಸಭೆಗೆ ಸ್ಪರ್ಧಿಸುವೆ ಎಂದು ಸ್ಪಷ್ಟಪಡಿಸಿದ್ದಾರೆ.
'ತಾವು ಬಿಎಸ್ ಯಡಿಯೂರಪ್ಪ ಅವರಿಗೆ ನಂಬಿಕೆ ದ್ರೋಹ ಮಾಡಿಲ್ಲ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಬಿಜೆಪಿಯಲ್ಲಿಯೇ ಉಳಿದಿರುವುದಾಗಿ ಬೊಮ್ಮಾಯಿ ಅಲವತ್ತುಕೊಂಡಿದ್ದಾರೆ.