ಬಾಗಲಕೋಟೆ : ಕೆಜೆಪಿ ಸಭೆಯಲ್ಲಿ ನಿರಾಣಿ ಪ್ರತ್ಯಕ್ಷ
ಬುಧವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಮುರುಗೇಶ್ ನಿರಾಣಿ ಭಾಗವಹಿಸಿದ್ದರು. ಬಿಜೆಪಿಯಲ್ಲೋ ? ಕೆಜಪಿಗೋ ? ಎಂಬ ಗೊಂದಲದಲ್ಲಿರುವ ನಿರಾಣಿ ಅವರ ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.
ಸಭೆಯಲ್ಲಿ ಮಾತನಾಡಿದ ನಿರಾಣಿ, ಮುಂದಿನ ಚುನಾವಣೆಗೆ ಜಮಖಂಡಿ ಕ್ಷೇತ್ರದಿಂದಲೇ ಸ್ಪರ್ಧಿಸುದಾಗಿ ತಿಳಿಸಿದರು. ಆದರೆ, ಯಾವ ಪಕ್ಷದಿಂದ ಎಂಬುದನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. ಎರಡು ದಿನದಲ್ಲಿ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೇಳಿದ್ದೇನೆ. ಆದರೆ, ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದ್ದು, ನಂತರ ಟಿಕೆಟ್ ನೀಡುವ ಕುರಿತು ಅಂತಿಮ ನಿರ್ಧಾರ ಪ್ರಕವಾಗಲಿದೆ ಎಂದು ಹೇಳಿದರು. ಜಮಖಂಡಿ ಜನರು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟಿದ್ದಾರೆ. ಆದ್ದರಿಂದ ಈ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ಯಾವ ಪಕ್ಷಕ್ಕೆ ಹೋಗ್ತಾರೆ : ನಿರಾಣಿ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಂಗಳವಾರ ಸಿಎಂ ಜಗದೀಶ್ ಶೆಟ್ಟರ್ ಭೇಟಿ ಮಾಡಿದ್ದ ಮುರುಗೇಶ್ ನಿರಾಣಿ ಸ್ಯದಲ್ಲೇ ಯಾವ ರಾಜಕೀಯ ಪಕ್ಷ ಸೇರುತ್ತೇನೆ ಎಂದು ಘೋಷಿಸುವುದಾಗಿ ಹೇಳಿಕೆ ನೀಡಿದ್ದರು.
ಸಿಎಂ ಶೆಟ್ಟರ್ ಮತ್ತು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಮುರುಗೇಶ್ ನಿರಾಣಿ ಬಿಜೆಪಿಯಲ್ಲೇ ಇರುತ್ತಾರೆ. ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಘೋಷಿಸಿದ್ದರು. ಇದರ ನಡುವೆಯೇ ನಿರಾಣಿ ಅವರು ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಮಾಧ್ಯಮದಲ್ಲಿ ನೋಡಿದ್ದೇನೆ : ಮುರುಗೇಶ್ ನಿರಾಣಿ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾವ ಪಕ್ಷ ಸೇರಬೇಕು ಎಂಬುದು ಅವರಿಗೆ ಬಿಟ್ಟ ನಿರ್ಧಾರ ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ