ಮೋಟಮ್ಮ ಅವರಿಗೆ ಸಕಲೇಶಪುರ ಬೇಡಂತೆ!
ಸ್ಕ್ರೀನಿಂಗ್ ಕಮಿಟಿ ದೆಹಲಿಯಲ್ಲಿ ಆರಂಭಿಕ ಹಂತದಲ್ಲಿ ಸಿದ್ಧಪಡಿಸಿದ್ದ ಸಂಭಾವ್ಯರ ಪಟ್ಟಿಯಲ್ಲಿ ಮೋಟಮ್ಮ ಸ್ಥಾನ ವಂಚಿತರಾಗಿದ್ದರು. ಆದರೆ, ಮಹಿಳೆಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸೋನಿಯಾಗಾಂಧಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ ಬಳಿಕ 16 ಮಹಿಳೆಯರು ಇರುವ ಪಟ್ಟಿಯೊಂದನ್ನು ಕೆಪಿಸಿಸಿ ಹೈಕಮಾಂಡ್ ಮುಂದಿಟ್ಟಿತ್ತು. ಗೊಂದಲದ ನಡುವೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಮೋಟಮ್ಮ ಅವರಿಗೆ ಸಕಲೇಶಪುರ ಕ್ಷೇತ್ರದಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿತ್ತು.
ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ, ಮೋಟಮ್ಮ ಸಕಲೇಶಪುರ ಕ್ಷೇತ್ರದ ಬಗ್ಗೆ ಸಮಗ್ರ ವಿವರ ತರಿಸಿಕೊಂಡಿದ್ದಾರೆ. ಟಿಕೆಟ್ ಬೇಕೆಂದರೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಒತ್ತಾಯವಿದ್ದರೂ ಫಲಿತಾಂಶದವರೆಗೆ ಕಾದು ನೋಡಲು ಚಿಂತಿಸಿದ್ದ ಮೋಟಮ್ಮರ ವಿರುದ್ಧ ಕೆಪಿಸಿಸಿ ವಲಯದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದ್ದವು. ಮಲ್ಲಿಕಾರ್ಜುನ ಖರ್ಗೆ, ಬಿ.ಎಲ್.ಶಂಕರ್, ಉಮಾಶ್ರೀ ಸಹಿತ ಅನೇಕ ನಾಯಕರು ಮೋಟಮ್ಮ ನಿಲುವಿನ ಬಗ್ಗೆ ಅಪಸ್ವರ ಎತ್ತಿದ್ದು ಬಹಿರಂಗವಾಗಿತ್ತು.
ಹಿರಿಯ ಕಾಂಗ್ರೆಸ್ ನಾಯಕ ರಂಗನಾಥ್ ಅವರು 'ತಾಲೂಕು ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಮೋಟಮ್ಮ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಹಾಸನ ಜಿಲ್ಲೆ ಸ್ಥಾನ ಉಳಿಸಿಕೊಳ್ಳಲು ಸಾಧ್ಯ. ಮಾಜಿ ಎಂಎಲ್ ಎ ಬೇಲೂರಿನ ಡಿ ಮಲ್ಲೇಶ್ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನಾಯಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು.
ಒಬ್ಬರಿಗೆ ಒಂದು ಹುದ್ದೆ ಎನ್ನುವ ಹೈಕಮಾಂಡ್ ನಿಯಮವನ್ನು ಮೋಟಮ್ಮ ಉಲ್ಲಂಘಿಸುವ ಸಿದ್ಧತೆ ಯಲ್ಲಿದ್ದರು. ಈ ಹಂತದಲ್ಲಿ ಹೇಮ ಶೇಖರ್, ಬಿ.ಎಸ್.ಜಯರಾಂ, ಎಂ.ಎಂ.ಲಕ್ಷಣಗೌಡ, ಅನಂತ್, ವಿನಯ ಕುಮಾರ್ರು ಸಭೆ ನಡೆಸಿ ಸಕಲೇಶಪುರ ಕ್ಷೇತ್ರ ಕಾಂಗ್ರೆಸ್ಗೆ ಲಾಭದಾಯಕವಲ್ಲ ಎನ್ನುವ ಬಗ್ಗೆ ಮೋಟಮ್ಮರವರಿಗೆ ಮನವರಿಕೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಸೋಲುಂಟಾದರೆ ತಮ್ಮ ಮುಂದಿನ ರಾಜಕೀಯ ನಡೆಗಳಿಗೆ ಅಡ್ಡಿಯಾಗುವ ಭೀತಿಯಿಂದ ಅವರು ಚುನಾವಣೆಯಲ್ಲಿ ಸ್ಪಧಿಸದಿರಲು ನಿರ್ಧರಿಸುವ ಮಾಹಿತಿ ಲಭ್ಯವಾಗಿದೆ.