ಬಿಜೆಪಿ ತೊರೆದ ಶಾಸಕ ಮಾನಪ್ಪ ವಜ್ಜಲ್
ಬುಧವಾರ ಫ್ಯಾಕ್ಸ್ ಮೂಲಕ ಮಾನಪ್ಪ ವಜ್ಜಲ್ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಎರಡು ದಿನದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಗೊಳ್ಳುವುದಾಗಿ ವಜ್ಜಲ್ ಘೋಷಿಸಿದ್ದಾರೆ.
ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ಸೇರುವುದಾಗಿ ಮಾನಪ್ಪ ವಜ್ಜಲ್ ಫೆಬ್ರವರಿಯಲ್ಲಿಯೇ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ್ದರು.ಅವರನ್ನು ತಮ್ಮ ಗೃಹ ಕಚೇರಿಗೆ ಕರೆಸಿಕೊಂಡು ಸಂಧಾನ ನಡೆಸಿ ಬಿಜೆಪಿ ತೊರೆಯದಂತೆ ಶೆಟ್ಟರ್ ಮನವೊಲಿಸಿದ್ದರು.
ಮಾನಪ್ಪ ವಜ್ಜಲ್ ಬಿಜೆಪಿ ತೊರೆಯುವುದಿಲ್ಲ ಎಂದು ಸ್ವತಃ ಸಿಎಂ ಶೆಟ್ಟರ್ ಘೋಷಿಸಿದ್ದರು. ಬದಲಾದ ರಾಜಕೀಯ ಚಿತ್ರಣದಿಂದಾಗಿ ವಜ್ಜಲ್ ಬಿಜೆಪಿ ತೊರೆದಿದ್ದು, ಬಿಜೆಪಿಯ ಮತ್ತೊಂದು ವಿಕೆಟ್ ಪತನಗೊಂಡಿದೆ. ಶೀಘ್ರದಲ್ಲೇ ಜೆಡಿಎಸ್ ಸೇರ್ಪಡೆಗೊಳ್ಳುವುದಾಗಿ ವಜ್ಜಲ್ ಹೇಳಿದ್ದಾರೆ.
ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಮತಹಾಕಿ ಪಕ್ಷದ ಮಾನ ಕಾಪಾಡಿದ್ದ ಮಾನಪ್ಪ ವಜ್ಜಲ್ ಬಿಜೆಪಿ ತೊರೆಯುವ ಶಾಸಕರ ಪಟ್ಟಿಯಲ್ಲೂ ಕಾಣಿಸಿಕೊಂಡಿಲಿಲ್ಲ. ಕೆಜೆಪಿ, ಕಾಂಗ್ರೆಸ್ ಸೇರವ ಶಾಸಕರ ಜೊತೆಯೂ ಗುರುತಿಸಿಕೊಂಡಿರಲಿಲ್ಲ.
ಅಚ್ಚರಿಯ ಬೆಳವಣಿಗೆಯಲ್ಲಿ ಮಾನಪ್ಪ ವಜ್ಜಲ್ ಬಿಜೆಪಿ ತೊರೆದಿದ್ದಾರೆ. ನಾಳೆ ಬೆಂಗಳೂರಿಗೆ ಆಗಮಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ವಜ್ಜಲ್, ಮುಂದಿನ ಚುನಾವಣೆಯಲ್ಲಿಯೂ, ಜೆಡಿಎಸ್ ಅಭ್ಯರ್ಥಿಯಾಗಿ ಲಿಂಗಸಗೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ