ಹೆಚ್ ಸಿಎಲ್ ವಿರುದ್ಧ ಉಪವಾಸ ಸತ್ಯಾಗ್ರಹ
ಶನಿವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಇಂಜಿನಿಯರ್ ಪದವಿ ಪಡೆದ ವಿದ್ಯಾರ್ಥಿಗಳನ್ನು ಹೆಚ್ ಸಿಎಲ್ 2011ರಲ್ಲಿ ಕಂಪನಿಗೆ ನೇಮಕ ಮಾಡಿಕೊಂಡಿದೆ. ಆದರೆ ಇದುವರೆಗೂ ಅವರನ್ನು ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ.
ಸುಮಾರು ಒಂದು ವಾರದಿಂದ ಕಂಪನಿ ವಿರುದ್ಧ ಪ್ರತಿಭಟನೆ ಆರಂಭಿಸಿರುವ ಇವರು, ತಾವು ಇಂಜಿನಿಯರಿಂಗ್ ಪದವಿ ಪಡೆದು ಒಂದು ವರ್ಷ ಕಳೆದರೂ ಕಂಪನಿ ತಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಇವರು, ಫೇಸ್ ಬುಕ್ ಮೂಲಕವು ಕಂಪನಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಅಕ್ಕಪಕ್ಕದ ರಾಜ್ಯಗಳಲ್ಲೂ ಕಂಪನಿ ಇದೇ ರೀತಿ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದು, ಹೊಸೂರು, ಚೆನ್ನೈ, ಹೈದರಾಬಾದ್, ಅಸ್ಸಾಂ ಮುಂತಾದ ನಗರಗಳಿಂದಲೂ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕಂಪನಿ ಧೋರಣೆಯನ್ನು ಖಂಡಿಸುತ್ತಿದ್ದಾರೆ.
ಸಂಕಷ್ಟದಲ್ಲಿ ವಿದ್ಯಾರ್ಥಿಗಳು : ಕೆಲಸಕ್ಕೆ ಸೇರಿಸಿಕೊಳ್ಳಲು ಒಂದು ವರ್ಷದ ವಿಳಂಬ ಮಾಡಿರುವುದರಿಂದ ಕೆಲವು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಗಳಲ್ಲಿ ಲೋನ್ ಪಡೆದು ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು, ಬ್ಯಾಂಕ್ ಸಾಲದ ಕಂತುಗಳನ್ನು ಕಟ್ಟಲು ಮತ್ತು ಕುಟುಂಬದ ನಿರ್ವಹಣೆಗಾಗಿ ಬೇರೆ ಬೇರೆ ಕೆಲಸಗಳಿಗೆ ತೆರಳುತ್ತಿದ್ದಾರೆ.
ಹಾಸನದ ವಿದ್ಯಾರ್ಥಿಯೊಬ್ಬ ಬೆಸ್ಕಾಂ ಕಾಲ್ ಸೆಂಟರ್ ಕೆಲಸಕ್ಕೆ ತೆರಳುತ್ತಿದ್ದಾರೆ. ಒಬ್ಬ ವಿದ್ಯಾರ್ಥಿನಿ ಟ್ಯೂಷನ್ ಮಾಡಿಕೊಂಡು ಸಾಲದ ಕಂತು ಕಟ್ಟುತ್ತಿದ್ದಾರೆ. ಕೆಲವು ಸಂಸ್ಥೆಗಳು ಇವರ ವಿದ್ಯಾರ್ಹತೆ ಯಾವುದೇ ಕೆಲಸವಿಲ್ಲ ಎಂದು ಇವರನ್ನು ನೇಮಕ ಮಾಡಿಕೊಂಡಿಲ್ಲ.
ಸಾವಿರಕ್ಕೂ ಅಧಿಕ ಮಂದಿ : ಹೆಚ್ ಸಿಎಲ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮಾಹಿತಿಯಂತೆ ಇದುವರೆಗೂ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ದೇಶದ ವಿವಿಧ ರಾಜ್ಯಗಳಲ್ಲಿ ನೇಮಕಾತಿ ಪತ್ರ ಪಡೆದು ಕಾದು ಕುಳಿತಿದ್ದಾರೆ. ಕಂಪನಿಯ ಮಾಹಿತಿ ಪ್ರಕಾರ ಮುಂದಿನ ತಿಂಗಳಿನಲ್ಲಿ ನೂರು ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಸಿದ್ಧತೆ ಪ್ರಾರಂಭಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ