ವೈದ್ಯಕೀಯ ಸೀಟು ಆಮಿಷ : ಮೂವರ ಬಂಧನ
ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ರಿಯಾ ಶ್ರೀಚಾರ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಬಸವೇಶ್ವರ ಕಾಲೇಜಿನಲ್ಲಿ, ವೈದ್ಯಕೀಯ ಸೀಟು ಕೊಡಿಸುವುದಾಗಿ ಆಮಿಷವೊಡ್ಡಿ ಮೂವರು 28 ಲಕ್ಷ ರೂ.ಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತರನ್ನು ಜೆ.ಪಿನಗರದ ನಿವಾಸಿಗಳಾದ ತನ್ವೀರ್ ಪಾಷ (33), ಮುಜಾಮಿ ಅಮೀನ್ (24) ಹಾಗೂ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ಸಯೈದ್ ಅಯೂಬ್ (26) ಎಂದು ಗುರುತಿಸಲಾಗಿದೆ.
ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 1 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಎಂ.ಜಿ ರಸ್ತೆಯ ಬಳಿ ಸ್ನೇಹಿತರಿಂದ ಇವರನ್ನು ಭೇಟಿಯಾದ ರಿಯಾ ಬಂಧಿತ ತನ್ವೀರ್ ಗೆ ಕೆ.ಜಿ.ಹಳ್ಳಿಯ ಕುಶಾಲನಗರದಲ್ಲಿ 28 ಲಕ್ಷ ರೂ ಗಳನ್ನು ನೀಡಿದ್ದಳು ಎಂದು ತನಿಖೆಯಿಂದ ತಿಳಿದು ಬಂದಿದೆ.
ಸಿಇಟಿ ಪರೀಕ್ಷೆ ಎದುರಾಗುತ್ತಿರುವುದರಿಂದ ಯಾವುದೇ ಮಧ್ಯವರ್ತಿಗಳ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಐವರ ತಂಡ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ಮಾಹಿತಿ ಇದೆ ಈ ಬಗ್ಗೆ ವಿದ್ಯಾರ್ಥಿಗಳು ಜಾಗ್ರತೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ರೌಡಿಶೀಟರ್ ಗಳು ವಶಕ್ಕೆ : ವಿಧಾನಸಭೆ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಕ್ಷಿಣ ವಲಯ ಪೊಲೀಸರು 100ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ರಾಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿಜಯ ನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಕೆ.ಪಿ.ಅಗ್ರಹಾರ, ಮಾಗಡಿ ರಸ್ತೆ, ತಿಲಕ್ ನಗರ, ಕಲಾಸಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು ಎಂದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ