ಯುವ ಕಾಂಗ್ರೆಸ್ ನಿಂದ ಟಿಕೆಟ್ ಗಾಗಿ ಹೋರಾಟ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಆದೇಶ ನೀಡಿದ್ದರು. ಆದರೆ, ಕಾಂಗ್ರೆಸ್ ಪಟ್ಟಿ ತಯಾರಿಸುತ್ತಿರುವ ಹಿರಿಯ ನಾಯಕರು ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ತಿಳಿದ ಯುವ ಕಾಂಗ್ರೆಸಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸುಮಾರು 12 ಕ್ಷೇತ್ರಗಳಲ್ಲಿ ಯುವ ಕಾಂಗ್ರೆಸ್ ಸದಸ್ಯರು ಟಿಕೆಟ್ ಬಯಸಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ಷಾನ್ ಸಹ ಮೂರು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಹಿರಿಯ ನಾಯಕರ ಧೋರಣೆಯಿಂದ ಟಿಕೆಟ್ ಕೈ ತಪ್ಪುವ ಸಂಭವ ಹೆಚ್ಚಾಗಿದೆ. ಆದ್ದರಿಂದ ರಾಜೀನಾಮೆ ತಂತ್ರದ ಮೂಲಕ ಟಿಕೆಟ್ ಪಡೆಯಲು ಯುವ ಕಾಂಗ್ರೆಸಿಗರು ಪ್ರಯತ್ನಿಸುತ್ತಿದ್ದಾರೆ.
ಮೈಸೂರಿನ ನರಸಿಂಹರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಟಿಕೆಟ್ ಬಯಿಸಿದ್ದಾರೆ. ಈ ಕ್ಷೇತ್ರದಿಂದ ಹಾಲಿ ಶಾಸಕ ತನ್ವೀರ್ ಸೇಠ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಟಿಕೆಟ್ ಕೈ ತಪ್ಪುವ ಭಯದಲ್ಲಿ ರಿಜ್ವಾನ್ ದೆಹಲಿಗೆ ತೆರಳಿದ್ದಾರೆ.
ಐವರಿಗೆ ಟಿಕೆಟ್ : ಕಾಂಗ್ರೆಸ್ ಹೈಕಮಾಂಡ್ ಐವರು ಯುವಕರಿಗೆ ಟಿಕೆಟ್ ನೀಡಲು ಈಗಾಗಲೇ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹಾಲಿ ಶಾಸಕ ಪ್ರಿಯ ಕೃಷ್ಣ, ಪ್ರಿಯಾಂಕ ಖರ್ಗೆ, ಅಜಯ್ ಸಿಂಗ್ ಹೆಸರುಗಳು ಪ್ರಮುಖವಾಗಿದೆ. ಸ್ವತಃ ರಿಜ್ವಾನ್ ಅವರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಆದ್ದರಿಂದ ರಾಜೀನಾಮೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಜೆಪಿ ಗಾಳ : ರಿಜ್ವಾನ್ ಯುವ ಕಾಂಗ್ರೆಸ್ ತೊರೆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಜೆಪಿ ಸಿದ್ಧವಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ರಿಜ್ವಾನ್ ಮೊದಲಿನಿಂದಲೂ ಕೆಜೆಪಿ ಪದಾಧಿಕಾರಿಗಳೊಂದಿಗೆ ಒಡನಾಟವಿಟ್ಟುಕೊಂಡಿದ್ದರು.
ಒಂದು ವೇಳೆ ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ ಕೆಜೆಪಿ ಸೇರಲು ಅವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ರಿಜ್ವಾನ್ ಶೀಘ್ರದಲ್ಲೇ ಭೇಟಿ ಮಾಡಲಿದ್ದಾರೆ ಎಂದು ಕೆಜೆಪಿ ಮೂಲಗಳೂ ತಿಳಿಸಿವೆ.
ಈಗಾಗಲೇ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲದ ಗೂಡಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಿ ಎಂದು ಸೋನಿಯಾ, ಯುವಕರಿಗೆ ಆದ್ಯತೆ ಎಂದು ರಾಹುಲ್ ಸೂಚನೆ ನೀಡಿದ್ದಾರೆ. ಎಲ್ಲಾ ಆದೇಶಗಳನ್ನು ಪಾಲಿಸಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದು ಇನ್ನೂ ಬಹಿರಂಗೊಂಡಿಲ್ಲ. ಶನಿವಾರ ನಡೆಯಲಿರುವ ಕಾಂಗ್ರೆಸ್ ಚುನಾವಣಾ ಸಮತಿ ಸಭೆಯಲ್ಲಿ ಟಿಕೆಟ್ ಕುರಿತು ಸ್ಪಷ್ಟ ಚಿತ್ರಣ ಹೊರಬೀಳುವ ಸಂಭವವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ