ಇವರು ಪತ್ರಕರ್ತರೋ ಅಥವಾ ನ್ಯಾಯಮೂರ್ತಿಗಳೋ?
ಮೈಸೂರು, ಮಾ. 28 : ದೃಶ್ಯ ಅಥವಾ ಮುದ್ರಣ ಮಾಧ್ಯಮಗಳು ನ್ಯಾಯಾಲಯಗಳಂತೆ ವರ್ತಿಸುತ್ತಿರುವುದು ತಪ್ಪು. ತಾವೇ ವಿಚಾರಣೆ ನಡೆಸಿ ತಾವೇ ತೀರ್ಪು ನೀಡಿ ಕೈತೊಳೆದುಕೊಳ್ಳುವ ಇವತ್ತಿನ ಪತ್ರಿಕೋದ್ಯಮದ ಪರಿಪಾಠ ತರವಲ್ಲ. ಈ ಬಗ್ಗೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎನ್.ಕುಮಾರ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಮೀಡಿಯ ಟ್ರಯಲ್ ಮಾಡುವ ಚಾಳಿಯನ್ನು ಮಾಧ್ಯಮ ವೇದಿಕೆಗಳು ನಿಲ್ಲಿಸಿಲ್ಲ."
ಇಂತಹ ಕಳವಳ, ಅನುಮಾನ ಹಾಗೂ ಸಮಕಾಲೀನ ಮಾಧ್ಯಮ ವೇದಿಕೆಗಳ ನಡವಳಿಕೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದವರು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಲೇಜಿನ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಜ್ರ ಮಹೋತ್ಸವ ಹಾಗೂ ಮಾಧ್ಯಮಗಳ ಇತ್ತೀಚಿನ ಪ್ರವೃತ್ತಿಗಳು' ವಿಷಯ ಕುರಿತ ರಾಜ್ಯ ಮಟ್ಟದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರು ಸ್ವನಿಯಂತ್ರಣ ಹಾಕಿಕೊಂಡು ಕಾರ್ಯನಿರ್ವಹಿಸಬೇಕು' ಎಂದು ಕಿವಿಮಾತು ಹೇಳಿದರು.
ನಂತರ ಒನ್ಇಂಡಿಯಾ' ಅಂತರ್ಜಾಲ ತಾಣದ ಸಂಪಾದಕ ಎಸ್.ಕೆ. ಶಾಮ ಸುಂದರ ಮಾತನಾಡಿ, ಇವತ್ತಿನ ಪತ್ರಿಕೋದ್ಯಮದಲ್ಲಿ ಕಾಣುವ ಟ್ರೆಂಡ್ ಎಂದರೆ, ಎಡಪಂಥೀಯರು ಹಾಗೂ ಬಲಪಂಥೀಯರು. ಸೆಕ್ಯುಲರ್ ಅಂಡ್ ಸಿಕ್ಯುಲರ್. ಇಬ್ಬರೂ ಅಪಾಯಕಾರಿ. ಹಾಗಾಗಿ, ಪತ್ರಕರ್ತರು ಯಾವ ಪಂಥದ ಕಡೆಗೂ ವಾಲದೆ, ಯಾರನ್ನೂ ಓಲೈಸದೆ ಸುದ್ದಿಯನ್ನು ಸುದ್ದಿಯಾಗಿ ಮಾತ್ರ ಕಾಣುವ ದೃಷ್ಟಿಕೋನ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಅನೇಕಾನೇಕ ಆವಿಷ್ಕಾರಗಳು ಪತ್ರಕರ್ತನಿಗೆ ವರವಾಗಿವೆ. ಮುಖ್ಯವಾಗಿ ಇಂಟರ್ನೆಟ್ ಮೊಬೈಲ್. ನಮ್ಮ ನಮ್ಮ ಭಾಷೆಗಳಲ್ಲೇ ಬರೆದು, ಪ್ರಕಟಿಸಿ, ಪ್ರಸಾರ ಮಾಡುವ ಅನುಕೂಲಗಳು ಅಂಗೈನಲ್ಲಿವೆ. ಭಾರತದಲ್ಲಿ ವ್ಯಾಪಕವಾಗಿ ವಿಸ್ತರಿಸುತ್ತಿರುವ ಇಂಟರ್ನೆಟ್ ಕನೆಕ್ಟಿವಿಟಿಯ ಪ್ರಯೋಜನ ಪಡೆಯುವ ಅವಕಾಶವನ್ನು ಪತ್ರಕರ್ತರು ದುಡಿಸಿಕೊಳ್ಳಬೇಕು. ಪತ್ರಿಕೋದ್ಯಮದ ನಾಳೆಗಳು ಮೊಬೈಲ್ ಇಂಟರ್ನೆಟ್, ಮೊಬೈಲ್ ಕಚೇರಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇರ್ತದೆ ಎಂದರು ಶಾಮ್.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಭಾರತದಲ್ಲಿ ಪತ್ರಿಕಾ ಶಿಕ್ಷಣ ಆರಂಭ ಮತ್ತು ನಡೆದು ಬಂದ ದಾರಿ ಕುರಿತು ಸವಿಸ್ತಾರವಾಗಿ ಮಾತನಾಡಿದರು. ದಶಕಗಳಿಂದ ಪತ್ರಿಕೋದ್ಯಮ ವಿಭಾಗಗಳನ್ನು ಬಿಳಿ ಆನೆಯಂತೆ ಕಾಣುತ್ತಿರುವ ವಿಶ್ವವಿದ್ಯಾನಿಲಯಗಳು ಇಂದಿನ ಆಧುನಿಕ ಪತ್ರಿಕೋದ್ಯಮದ ಯುಗಕ್ಕೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ವಿಫಲಗೊಂಡಿವೆ. ಶಿಕ್ಷಣ ಪಡೆದು ವೃತ್ತಿ ಆರಂಭಿಸುವ ವಿದ್ಯಾರ್ಥಿಗಳು ಕಣ್ಣಿಗೆ ಪಟ್ಟಿಕಟ್ಟಿ ಕಾಡಿಗೆ ಬಿಟ್ಟವರಂತ್ತಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎನ್ಆರ್ಐಗಳು, ರಾಜಕಾರಣಿಗಳು, ಉದ್ಯಮಿಗಳ ಪ್ರವೇಶದಿಂದ ಪತ್ರಕರ್ತರ ಸೃಜನಶೀಲತೆಗೆ ಮೋಸ ಆಗುತ್ತಿದೆ. ಪತ್ರಕರ್ತರು ಸ್ವಾತಂತ್ರ್ಯ ಕಳೆದುಕೊಂಡು ಕೇವಲ ಬಾಡಿಗೆ ಬರಹಗಾರನಂತೆ ಕೆಲಸ ಮಾಡಬೇಕಿದೆ. ನಾವೇ ಮಾಡಿಕೊಂಡ ತಪ್ಪುಗಳ ಪರಿಣಾಮ ಇಂದು ತುರ್ತು ಪರಿಸ್ಥಿತಿಯ ಕಾಲಕ್ಕೆ ನಮ್ಮನ್ನು ನಾವು ದೂಡಿಕೊಂಡಿದ್ದೇವೆ. ಇದನ್ನು ಮೀರಿ ಕೆಲಸ ಮಾಡಲು ಬಯಸುವ ಪತ್ರಕರ್ತರಿಗೆ ಕೆಲವೊಮ್ಮೆ ಆಡಳಿತ ಮಂಡಳಿಯಿಂದಲೂ ಸಹ ಬೆಂಬಲ ಸಿಗುವುದಿಲ್ಲ. ಇದು ಪತ್ರಕರ್ತರ ಪಾಲಿಗೆ ದೊಡ್ಡ ಸವಾಲು ಎಂದರು ದೀಪಕ್.
ಉದ್ಘಾಟನೆ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಸಮುದಾಯ ಚಲನಚಿತ್ರ ನಿರ್ದೇಶಕ ಎಂ.ಎಸ್.ರಮೇಶ್, ಎಸ್.ಕೆ.ಶಾಮ ಸುಂದರ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಕಿಕ್ಕಿರಿದು ನೆರೆದಿದ್ದ ವಿದ್ಯಾರ್ಥಿ ಸಮುದಾಯ ಪತ್ರಿಕೋದ್ಯಮದ ಅಂಕುಡೊಂಕುಗಳ ಬಗ್ಗೆ ದಿಟ್ಟವಾದ ಪ್ರಶ್ನೆಗಳನ್ನು ಕೇಳಿದರು. ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಲತಾ ಕೆ. ಬಿದ್ದಪ್ಪ, ಆಡಳಿತಾಧಿಕಾರಿ ಡಾ.ನಂಜೇಗೌಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಬಿ.ಕುನ್ನೂರು ಉಪಸ್ಥಿತರಿದ್ದರು.
ಮಹಾರಾಜ ಕಾಲೇಜು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ರೂಪಿಸಿದ ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದವರು ಉಪನ್ಯಾಸಕ ಲೋಹಿತ್ ಜೆ. ಮತ್ತು ಕುಮಾರಸ್ವಾಮಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ