ನಿರಾಣಿ, ಕತ್ತಿ ಕೆಜೆಪಿ ಸೇರ್ಪಡೆಗೆ ದಿನಾಂಕ ನಿಗದಿ
ಕೆಜೆಪಿ ಸೇರುವ ಪಟ್ಟಿಯಲ್ಲಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಕೃಷಿ ಸಚಿವ ಉಮೇಶ್ ಕತ್ತಿ ಮಾ.29 ಮತ್ತು 30 ರಂದು ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೆಜೆಪಿ ಸೇರಲಿದ್ದಾರೆ. ಉಳಿದ ಸಚಿವರು ಮತ್ತು ಶಾಸಕರ ಕಥೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮಾ.27ರಿಂದ ಯಡಿಯೂರಪ್ಪ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರೊಂದಿಗೆ ಗುರುತಿಸಿಕೊಂಡು, ಮಾ.29ರಂದು ಜಮಖಂಡಿಯಲ್ಲಿ ನಡೆಯುವ ಕರ್ನಾಟಕದ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಮುರುಗೇಶ್ ನಿರಾಣಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೆಜೆಪಿ ಸೇರಿಕೊಳ್ಳಲಿದ್ದಾರೆ.
ಮಾ.30ರಂದು ಬೆಳಗಾವಿಯಲ್ಲಿ ಕೆಜೆಪಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಅಂದು ಯಡಿಯೂರಪ್ಪ ಸಮ್ಮುಖದಲ್ಲಿ ಉಮೇಶ್ ಕತ್ತಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೆಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಬೆಳಗಾವಿ ಜಿಲ್ಲೆಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು ಕತ್ತಿಯೊಂದಿಗೆ ಕೆಜೆಪಿ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಸೋಮಣ್ಣ ಕೆಜೆಪಿಗೆ : ಮಹತ್ವದ ಬೆಳವಣಿಗೆಯೊಂದರಲ್ಲಿ ವಸತಿ ಸಚಿವ ವಿ.ಸೋಮಣ್ಣ ಕೆಜೆಪಿ ಸೇರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ನಾನು ಬಿಜೆಪಿ ಬಿಡುವುದಿಲ್ಲ ಎನ್ನುತ್ತಿದ್ದ ಸೋಮಣ್ಣ, ಗೋವಿಂದರಾಜ ನಗರ ಕ್ಷೇತ್ರದಲ್ಲಿ ಶುಕ್ರವಾರದಿಂದಲೇ ಪ್ರಚಾರ ಕಾರ್ಯ ಆರಂಭಿಸಬೇಕಾಗಿತ್ತು.
ಆದರೆ, ಅದನ್ನು ತಾತ್ಕಾಲಿಕವಾಗಿ ಮುಂದೂಡಿರುವ ಅವರು ಕೆಜೆಪಿ ಸೇರುವ ಉತ್ಸಾಹದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರೊಡನೆ ಈ ಕುರಿತು ಈಗಾಗಲೇ ಸೋಮಣ್ಣ ಮಾತುಕತೆ ನಡೆಸಿದ್ದಾರೆ ಎಂದು ಕೆಜೆಪಿ ಮೂಲಗಳು ತಿಳಿಸಿವೆ.
ಬೊಮ್ಮಾಯಿ ಬರೋಲ್ಲ : ಈಗಾಗಲೇ ಬಿಜೆಪಿ ತೊರೆಯುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಅದರಂತೆ ಅವರು ಕೆಜೆಪಿ ಸೇರುವ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಬಸವರಾಜ್ ಬೊಮ್ಮಾಯಿ, ರೇಣುಕಾಚಾರ್ಯ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಯಲ್ಲೇ ಉಳಿಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ರಾಜಕೀಯದಲ್ಲಿ ಏನಾದರೂ ಆಗಬಹುದು. ಆದ್ದರಿಂದ ಈ ಉಭಯ ನಾಯಕರು ಕೆಲವೇ ದಿನಗಳಲ್ಲಿ ಕೆಜೆಪಿ ಸೇರಿದರೂ ಆಶ್ವರ್ಯಪಡಬೇಕಾಗಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ