ಬಿಟಿಎಂ: ಈ ಬಾರಿಯೂ ರಾಮಲಿಂಗಾ ರೆಡ್ಡಿ ಗೆಲ್ತಾರಾ?
ಬೆಂಗಳೂರು, ಮಾರ್ಚ್ 25: ಸುಮ್ಮನೇ ಹಾಗೇ... ರಾಜಧಾನಿಯಲ್ಲಿ ಜನರಿಗೆ ಸಿಗುವಂತಹ, ಜನಾನುರಾಗಿ, ಜನಪರ ಎನಿಸಿಕೊಂಡಿರುವ ಶಾಸಕರನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿದಾಗ ಮೊದಲಿಗೆ ಕಣ್ಣಿಗೆ ಬೀಳುವವರು ರಾಮಲಿಂಗಾ ರೆಡ್ಡಿ ಎಂಬ ಅಪ್ಪಟ ಜನನಾಯಕ.
ಬೆಂಗಳೂರು ದಕ್ಷಿಣ ಭಾಗ ಕಂಡ ಈ ಅಪರೂಪದ ಜನನಾಯಕ ಎಲ್ಲರ ಕೈಗೂ ಸಿಗುವ/ ಎಲ್ಲರಿಂದಲೂ ಸಮಾನ ಗೌರವ ಬಯಸುವ ಜನಾನುರಾಗಿ ಶಾಸಕ. ಇವರು ಪ್ರತಿನಿಧಿಸುತ್ತಿರುವುದು ಕಾಂಗ್ರೆಸ್ ಪಕ್ಷವನ್ನು.
ಪ್ರಸ್ತುತ ಇವರು ಪ್ರತಿನಿಧಿಸುತ್ತಿರುವುದು BTM Layout ಶಾಸನಸಭಾ ಕ್ಷೇತ್ರವನ್ನು. ಅದಕ್ಕೂ ಮುನ್ನ, ರೆಡ್ಡಿ ಬರೋಬ್ಬರಿ ನಾಲ್ಕು ಬಾರಿ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಎಂಬುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ದಿನ ಬೆಳಗಾದರೆ ಟಿವಿ ಮಾಧ್ಯಮಗಳಲ್ಲಿ ವಿಜೃಂಭಿಸುವ ತೇಜಸ್ವಿನಿ, ಉಗ್ರಪ್ಪಗಳ ಮಧ್ಯೆ ರಾಮಲಿಂಗಾ ರೆಡ್ಡಿ ನಿಜಕ್ಕೂ ಅಪರೂಪದ ವ್ಯಕ್ತಿತ್ವದವರಾಗುತ್ತಾರೆ. ಅಸಲಿಗೆ ಅವರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ.
ರಾಮಲಿಂಗಾ ರೆಡ್ಡಿ ಅವರು ಹೋಂ ಪಿಚ್ ಜಯನಗರದಿಂದ ಬಿಟಿಎಂ ಲೇಔಟಿಗೆ ಶಿಫ್ಟ್ ಆಗುತ್ತಿದ್ದಂತೆ ಉತ್ತರಹಳ್ಳಿಯ ಹಿಂದುಳಿದ ವಾರ್ಡುಗಳು, ಮಡಿವಾಳ, ಕೋರಮಂಗಲ, ಈಜಿಪುರ, ಜಕ್ಕಸಂದ್ರ, ಲಕ್ಕಸಂದ್ರ, ಎಚ್ಎಸ್ಆರ್ ಲೇ ಔಟ್, ಮೈಕೋ ಲೇಔಟ್, ವೆಂಕಟಾಪುರ, ಕಾವೇರಿ ಪಾಳ್ಯ, ವೆಂಕಟೇಶ್ವರ ಲೇಔಟ್, ಎಕೆ ಕಾಲೊನಿ ಜನಜೀವನ ಸ್ವಲ್ಪಮಟ್ಟಿಗೆ ಸಹ್ಯವಾಗಿಸಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳು ನಿಜಕ್ಕೂ ಒಂದಷ್ಟು ಸುಧಾರಿಸಿವೆ.
ಮುಂದ!?: ಅಸಲಿಗೆ ಜಯನಗರದಂತಹ ಹಳೆಯ, ಅಚ್ಚುಕಟ್ಟಾದ ಬಡಾವಣೆಗೆ ಶಾಸಕರೇ ಬೇಕಾಗೋಲ್ಲ. ಇಲ್ಲಿ ವ್ಯವಸ್ಥೆಯೇ ಹಾಗಿದೆ. ಆದರೆ ಬಿಟಿಎಂ ಲೇಔಟ್ ಹಾಗಲ್ಲ. ರಾಮಲಿಂಗಾ ರೆಡ್ಡಿ ಇಲ್ಲಿನ ಶಾಸಕರಾಗಿ ಮೊದಲ ಅವಧಿಯನ್ನಷ್ಟೇ ಪೂರೈಸಿದ್ದಾರೆ. ಮುಂದೆ ಕ್ಷೇತ್ರದಲ್ಲಿ ಈಜುಕೊಳ, ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ, ದೊಡ್ಡ ಆಟದ ಮೈದಾನ, ಪಾರ್ಕುಗಳ ಅಭಿವೃದ್ಧಿ, ಆಸ್ಪತ್ರೆ ಆಧುನೀಕರಣ, ಬಸ್ ಸ್ಟಾಂಡುಗಳ ಅಭಿವೃದ್ಧಿ ಇವೇ ಮುಂತಾದ ಜನೋಪಯೋಗಿ ಕೆಲಸಗಳಿಗೆ ಅವರು ಒತ್ತು ಕೊಡಬೇಕಾಗುತ್ತದೆ. Privided, ಮತದಾರ ಆತನನ್ನೇ ಗೆಲ್ಲಿಸಬೇಕು ಅಷ್ಟೇ!
ಸುಶಿಕ್ಷಿತ ರಾಮಲಿಂಗಾ ರೆಡ್ಡಿ ತಾವು ಮಾಡಿರುವ ಕೆಲಸಗಳ ಬಗ್ಗೆ ತಾವೇ ಮೈಕ್ ಹಿಡಿದು ಮಾತನಾಡೋಲ್ಲ. ಫಲಾನುಭವಿಗಳಾದ ಕ್ಷೇತ್ರದ ಜನರನ್ನು ಕೇಳಿನೋಡಿ ಎನ್ನುತ್ತಾರೆ.
ಪ್ರಥಮ ಚುಂಬನಂ ದಂತ ಭಗ್ನಂ; ಆಮೇಲೆ?: ರಾಮಲಿಂಗಾ ರೆಡ್ಡಿ ದೂರದವರೇನಲ್ಲ. ಇಲ್ಲೇ ಒಕ್ಕದ ಆನೇಕಲ್ ನವರು. ಹೊಂಬೇಗೌಡನಗರ ಸರಕಾರಿ ಶಾಲೆಯಲ್ಲಿ ಓದಿಕೊಂಡವರು. 'ಗ್ಯಾಸ್' ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿದರು. ಮುಂದೆ ಕಾನೂನು ವ್ಯಾಸಂಗ ಮಾಡುತ್ತಿರುವಾಗ ಮಧ್ಯೆಯೇ ರಾಜಕೀಯಕ್ಕೆ ಎಂಟ್ರಿಕೊಟ್ಟವರು. ಶಾಲಾ ದಿನಗಳಲ್ಲೇ ಯುವ ಕಾಂಗ್ರೆಸ್ಸಿನಲ್ಲಿ ಸ್ವಲ್ಪಮಟ್ಟಿಗೆ ಗುರುತಿಸಿಕೊಂಡಿದ್ದರು.
ಆರಂಭದಿಂದಲೂ (1973ರಿಂದ) ಕಾಂಗ್ರೆಸ್ ಪಕ್ಷಕ್ಕೆ ಅಂಕಿತರಾದವರು. ಪಕ್ಷದಲ್ಲಿ ಇಡೀ ಬೆಂಗಳೂರಿನ ಮೇಲೆ ಇಂದಿಗೂ ಹಿಡಿತ ಸಾಧಿಸಿದ್ದಾರೆ. 1983ರಲ್ಲಿ ಕಾರ್ಪೊರೇಶನ್ ಗೆ ಆಯ್ಕೆಯಾದರು. 2008ರವರೆಗೂ 10 ವರ್ಷ ಕಾಲ ಬೆಂಗಳೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
1985ರಲ್ಲಿ ವಿಧಾನಸಭೆ ಚುನಾವಣೆಗೇನೋ ನಿಂತುಬಿಟ್ಟರು. ಆದರೆ ಸೋತರು. ಮುಂದೆ 1989ರಲ್ಲಿ ಮತ್ತೆ ಕಣಕ್ಕಿಳಿದು ವಿಧಾನಸಭೆ ಪ್ರವೇಶಿಸಿದವರು ಅಲ್ಲೇ ಕಾಯಂ ಬಿಡಾರ ಹೂಡಿದ್ದಾರೆ. ತಾಜಾ ಆಗಿ 2008ರಲ್ಲಿ ಒಂದೂವರೆ ಲಕ್ಷ ಹೊಸ ಮತದಾರರ ಸಮ್ಮುಖದಲ್ಲಿ ಬಿಟಿಎಂನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಒಮ್ಮೆ ಶಿಕ್ಷಣ ಸಚಿವರೂ ಆಗಿದ್ದರು.
ಇಂದಿರಾ ಗಾಂಧಿ, ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳುವ ರಾಮಲಿಂಗಾ ರೆಡ್ಡಿ ಅವರೇ ತಮಗೆ ಪ್ರೇರಕ ಶಕ್ತಿ ಎಂದು ಸ್ಮರಿಸುತ್ತಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ