ಮಾಗಡಿ ರಸ್ತೆಯಲ್ಲಿ ಬೆಂಕಿ ಆಕಸ್ಮಿಕ : ಆರು ಸಾವು
ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ನಲ್ಲಿರುವ ಎಸ್.ಆರ್.ಸೀಟಿಂಗ್ ಸಿಸ್ಟಂ ಗೋಡೌನ್ ನಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬೆಳಗ್ಗೆ 5.30ರ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಗೋದಾಮಿನಲ್ಲಿ ಒಟ್ಟು 8 ಜನ ಕಾರ್ಮಿಕರರಿದ್ದರು. ಇವರಲ್ಲಿ ಆರು ಮಂದಿ ಸಜೀವವಾಗಿ ದಹನವಾಗಿದ್ದಾರೆ.
ಮೃತಪಟ್ಟವರು ಉತ್ತರ ಭಾರತ ಕಾರ್ಮಿಕರಾಗಿದ್ದು 22-28 ವರ್ಷದವರು ಎಂದು ಗುರುತಿಸಲಾಗಿದ್ದು, ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ತಾಬಿಲ್, ಸರ್ಫರೋಜ್, ನೂರ್ ಹಾಸನ್, ಉಸ್ಮಾನ್, ನದೀಂ ಖಾನ್, ಗಜಿನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಳಗ್ಗೆ 5.30ರ ಸುಮಾರಿಗೆ ಒಬ್ಬ ಕಾರ್ಮಿಕ ಟೀ ಕುಡಿಯಲು ಹೊರಗಿನಿಂದ ಗೋಡೌನ್ ಬಾಗಿಲು ಹಾಕಿಕೊಂಡು ಹೋಗಿದ್ದು, ಬೆಂಕಿ ಹೊತ್ತಿಕೊಂಡ ತಕ್ಷಣ ಉಳಿದ ಕಾರ್ಮಿಕರು ಹೊರಬರಲಾರದೆ ಸ್ಥಳದಲ್ಲೇ ಸಜೀವವಾಗಿ ದಹನವಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ 7 ಅಗ್ನಿ ಶಾಮಕ ದಳದ ವಾಹನಗಳು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್.ಆರ್.ಸೀಟಿಂಗ್ ಸಿಸ್ಟಂ ಸಿನಿಮಾ ಮಂದಿರಗಳಿಗೆ ಐಷಾರಾಮಿ ಆಸನಗಳನ್ನು ತಯಾರಿಸುವ ಕಾರ್ಖನೆಯ ಗೋಡೌನ್ ಆಗಿತ್ತು. ಒಬ್ಬ ಕಾರ್ಮಿಕನಿಗೆ ಗಂಭೀರಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ರಾತ್ರಿ ಪಾಳಿಯಲ್ಲಿ ಒಟ್ಟು 8 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದ್ದು ಒಬ್ಬ ಕಾರ್ಮಿಕನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಬೆಂಕಿ ಬಿದ್ದ ತಕ್ಷಣ ಗೋದಾಮಿನ ಮಾಲೀಕ ಅಮಿತ್ ರಾಥೋಡ್ ಸುಂದರಲಾಲ್ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಟುಕಾಟ ನಡೆಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ