ರಾಜ್ಯದ 9 ಕಡೆ ಲೋಕಾಯುಕ್ತ ದಾಳಿ : ಭ್ರಷ್ಟರಿಗೆ ಶಾಕ್
ಶುಕ್ರವಾರ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ 9 ಜಿಲ್ಲೆಗಳ 12 ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಕಾರ್ಯಚರಣೆ ನಡೆದಿದೆ. ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ, ಗುಲ್ಬರ್ಗಾಗಳಲ್ಲಿ ಏಕಕಾಲಕ್ಕೆ ಸ್ಥಳೀಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಲೋಕಾಯಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವಲಯ ಅರಣ್ಯಾಧಿಕಾರಿ ರಾಮದಾಸ್ ಅವರ ಉದಯಗಿರಿ ಹಾಗೂ ಪಣಕಹಳ್ಳಿಯಲ್ಲಿರುವ ಅವರ ಅತ್ತೆಮನೆ ಮತ್ತು ಬೆಂಗಳೂರಿನ ಜಯನಗರದ ಅವರ ಸ್ನೇಹಿತನ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 29 ವರ್ಷದಿಂದ ಒಂದೇ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ಅಪಾರ ಪ್ರಮಾಣದಲ್ಲಿ ಆಸ್ತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ಕೋಲಾರ : ಕೋಲಾರ ಜಿಲ್ಲಾ ಪಂಚಾಯತ್ ಕಿರಿಯ ಸಹಾಯಕ ಇಂಜಿನಿಯರ್ ಸೈಯದ್ ಅನ್ವರ್ ಇಸ್ಲಾಮ್ ಮನೆಯ ಬಾಗಿಲನ್ನು ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ 5.30ಕ್ಕೆ ತಟ್ಟಿದ್ದಾರೆ. ದಾಳಿವೇಳೆ 1 ಕೋಟಿ ಬೆಲೆಬಾಳುವ ನಿವಾಸ, 2 ನಿವೇಶನ, 2.2ಲಕ್ಷ ಬ್ಯಾಂಕ್ ಠೇವಣಿ ಮುಂತಾದವುಗಳು ಪತ್ತೆಯಾಗಿದ್ದು, ಪರಿಶೀಲನೆ ಮುಂದುವರೆದಿದೆ.
ಚಿತ್ರದುರ್ಗ : ಪ್ರಾದೇಶಿಕ ವೈದ್ಯಾಧಿಕಾರಿ ಡಾ.ಜಗದೀಶ್ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯಾದ ಜಗದೀಶ್ ನಗರದಲ್ಲಿ ಖಾಸಗಿ ಆಸ್ಪತ್ರೆ ಹೊಂದಿದ್ದರು ಎಂದು ತಿಳಿದು ಬಂದಿದೆ. ಐಷಾರಾಮಿ, ಕಾರು, ಪಿಠೋಪಕರಣ ಮುಂತಾದವುಗಳ ಮೌಲ್ಯವೇ 3 ಕೋಟಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕಾರ್ಯನಿರ್ವಾಹಣಾಧಿಕಾರಿ ಚನ್ನಬಸಪ್ಪ ಅವರ ಗುಲ್ಬರ್ಗಾ, ಮೂಡಿಗೆರೆ, ಬೆಂಗಳೂರಿನ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಕೋಟ್ಯಾಂತರ ರೂ. ಅಕ್ರಮ ಆಸ್ತಿ ಮತ್ತು ಅಳಂದಾ ತಾಲೂಕಿನಲ್ಲಿ 23 ಎಕರೆ ಕೃಷಿ ಭೂಮಿಯನ್ನು ಚನ್ನಬಸಪ್ಪ ಹೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರು : ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಶಿವರಾಮ ರೆಡ್ಡಿ ನೇತೃತ್ವದ ತಂಡ ಕನಕಪುರ ರಸ್ತೆಯಲ್ಲಿರುವ ಕೃಷಿ ಇಲಾಖೆ ನಿರ್ದೇಶಕ ಸರ್ವೇಶ್ ಮನೆಯ ಬಾಗಿಲು ತಟ್ಟಿದ್ದಾರೆ. ಆಸ್ತಿ, ಬ್ಯಾಂಕ್ ಖಾತೆಗಳ ಮಾಹಿತಿ ಮುಂತಾದವುಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ : ಜಿಲ್ಲಾ ಲೋಕಾಯುಕ್ತ ಎಸ್ಪಿ ಲಿಂಗಾರೆಡ್ಡಿ ನೇತೃತ್ವದಲ್ಲಿ ನಾಲ್ಕು ಜನ ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹುಬ್ಬಳಿ ನಗರಾಭಿವೃದ್ಧಿ ಇಲಾಖೆ ಆಯುಕ್ತ ಎಂ.ತಿಪ್ಪೇಶ್ರ ಕೇಶವಪುರ ನಿವಾಸದ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಉಳಿದಂತೆ ಹಾವೇರಿಯಲ್ಲಿ ಕಂದಾಯ ನಿರೀಕ್ಷಕ ಮುಹಮ್ಮದ್ ಯಾಸೀನ್ ಮುಲ್ಲಾ, ಸಹಾಯಕ ಕೃಷಿ ಅಧಿಕಾರಿ ರಾಜು ಗುಡಿಗೇರಿ, ಜಲಾನಯನ ಇಲಾಖೆ ಮುಖ್ಯ ಇಂಜಿನಿಯರ್ ಬಸವರಾಜ್ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.
ಒಟ್ಟು 12 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಒಂದೆಡರು ದಿನದಲ್ಲಿ ಅಧಿಕಾರಿಗಳ ಅಕ್ರಮ ಆಸ್ತಿಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸತ್ಯನಾರಾಯಣರಾವ್ ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ