ಮೊದಲೇ ಅಭ್ಯರ್ಥಿ ಪ್ರಕಟಿಸದಿರಲು 3 ಕಾರಣಗಳು
ಕಾರಣ 1 : ಅಭ್ಯರ್ಥಿಯ ಹೆಸರನ್ನು ಸಾಕಷ್ಟು ಮೊದಲೇ ಪ್ರಕಟಿಸಿದರೆ, ಅಭ್ಯರ್ಥಿಯ ಪೂರ್ವಾಪರ ತಿಳಿದುಕೊಳ್ಳಲು ಮತದಾರರಿಗೆ ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ಅಂಥವರಿಗೆ ಮತ ಹಾಕಲು ಮತದಾರ ಹಿಂದೇಟು ಹಾಕಬಹುದು. ಆದ್ದರಿಂದ, ಅಂತಹ ಅಭ್ಯರ್ಥಿಯ ಮಹತ್ವವನ್ನು ತಗ್ಗಿಸಿ, ಪಕ್ಷದ ವರ್ಚಸ್ಸಿನ ಆಧಾರದ ಮೇಲೆ ಮತ ಕೇಳಲು ಪಕ್ಷಕ್ಕೆ ಅನುಕೂಲವಾಗುತ್ತದೆ.
ಕಾರಣ 2 : ಯಾವುದೇ ಕ್ಷೇತ್ರಕ್ಕೆ ಯಾವನೊಬ್ಬ ಅಭ್ಯರ್ಥಿ ಹೆಸರು ಪ್ರಕಟವಾಗುತ್ತಿದ್ದಂತೆ ಟಿಕೆಟ್ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರು ತಮ್ಮನ್ನು ಕಡೆಗಣಿಸಿದ್ದೇಕೆ ಎಂದು ಮುನಿಸಿಕೊಳ್ಳಬಹುದು. ಟಿಕೆಟ್ ವಂಚಿತರು ಭುಗಿಲೆದ್ದು ಪಕ್ಷವಿರೋಧಿ ಚಟುವಟಿಕೆ ಶುರುಮಾಡಿಬಿಡುವ ಸಂಭವನೀಯತೆ ಇರುತ್ತದೆ. ಇಂಥ ರಗಳೆಯೇ ಬೇಡವೆಂದು ಕಡೆ ಘಳಿಗೆಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಂಪ್ರದಾಯ ಪಕ್ಷಗಳು ಇಟ್ಟುಕೊಂಡಿವೆ.
ಕಾರಣ 3 : ಪ್ರಮುಖ ಕಾರಣವೇನೆಂದರೆ, ದೀರ್ಘ ಪ್ರಚಾರಕಾರ್ಯ ಕೈಗೊಂಡು, ಜನರ ಅಭಿಪ್ರಾಯಪಡೆದ ನಂತರ ಉತ್ತಮ ಮತ್ತು ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಟ್ಟೆ ರಾಜಕೀಯ ಮಾಡಿ ದುರ್ಲಾಭ ಪಡೆದವರಿಗೆ ಆ ಪಕ್ಷದ ಕದ ಮುಚ್ಚಿದಂತೆಯೇ ಸರಿ.
ಆದ್ದರಿಂದ, ಮೊದಲೇ ಸೂಕ್ತ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರೆ, ಹೆಚ್ಚು ಸಮಯ ಕಾಲ ಪ್ರಚಾರ ಮಾಡುತ್ತ, ಮತದಾರರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತ ಅವರ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ. ಲೋಕಸಭೆ ಚುನಾವಣೆಗೆ 6ರಿಂದ 9 ತಿಂಗಳು, ವಿಧಾನಸಭೆಗೆ 4ರಿಂದ 6 ತಿಂಗಳು ಮತ್ತು ಪರಿಷತ್ ಚುನಾವಣೆಗೆ 3 ತಿಂಗಳು ಪ್ರಚಾರ ನಡೆಸುವುದು ಅಗತ್ಯ. ಆದರೆ, ಎಲ್ಲ ಕ್ಷೇತ್ರಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಹುಡುಕುವುದು ನಿಜಕ್ಕೂ ಒಂದು ಸವಾಲೇ ಸರಿ. ಹೆಚ್ಚು ಸಮಯ ಪ್ರಚಾರ ಮಾಡಿದವರಿಗೆ ಉತ್ತಮ ಭವಿಷ್ಯ ಕಟ್ಟಿಟ್ಟ ಬುತ್ತಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ