ಈ ಬಾರಿಯ ಪಿಯುಸಿ ಗಣಿತ ಪತ್ರಿಕೆ ಸಿಕ್ಕಾಪಟ್ಟೆ ಟಫ್
ಆದರೂ ಸಣ್ಣಪುಟ್ಟ ವದಂತಿಗಳು ಹಬ್ಬುವುದು ಮಾತ್ರ ತಪ್ಪಿಲ್ಲ. ಮಾರ್ಚ್ 20ರಂದು ನಡೆದ ಗಣಿತ ಪ್ರಶ್ನೆಪತ್ರಿಕೆ ನೋಡಿದ ಕೆಲವು ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ಕಾರಣ ಈ ಬಾರಿಯ ಪ್ರಶ್ನೆಪತ್ರಿಕೆ ಸಿಕ್ಕಾಪಟ್ಟೆ ಟಫ್ ಎಂದು. ಸಿಲಬಸ್ ನಲ್ಲಿಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
"ಕಳೆದ 10 ವರ್ಷಗಳಲ್ಲಿ ಕಂಡ ಅತ್ಯಂತ ಕಠಿಣ ಪಶ್ನೆಪತ್ರಿಕೆ ಇದಾಗಿದೆ. ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆ ಕೇಳದೆ ನಿರ್ಲಕ್ಷಿಸಬಹುದಾದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಅನಿರೀಕ್ಷಿತ ಘಟನೆಯಿಂದ ವಿದ್ಯಾರ್ಥಿಗಳು ಪೇಚಿಗೆ ಸಿಲುಕಿದ್ದಾರೆ. ಕಡಿಮೆ ಅಂಕಗಳಿಗೆ ಹೆಚ್ಚು ಉತ್ತರ ಬಯಸುವ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಸಮಯ ಹಾಳು ಮಾಡಿದ್ದಾರೆ" ಎಂದು ಹೆಸರು ಹೇಳಲು ಇಚ್ಛಿಸದ ಗಣಿತ ಉಪನ್ಯಾಸಕರೊಬ್ಬರು ಹೇಳಿದ್ದಾರೆ.
"ಈ ಬಾರಿ ಗಣಿತ ಪ್ರಶ್ನೆಪತ್ರಿಕೆ ಕೇವಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ನಗರಪ್ರದೇಶದವರಿಗೂ ಕಬ್ಬಿಣದ ಕಡಲೆಯಾಗಿದೆ. ಶೇ.30ರಿಂದ 35ರಷ್ಟು ಪ್ರಶ್ನೆಪತ್ರಿಕೆಗಳು ನಿರೀಕ್ಷಿತವಲ್ಲ" ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಈ ಅಂಶಗಳ ಕಾರಣ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
"ಗಣಿತ ಪ್ರಶ್ನೆ ಪತ್ರಿಕೆಯಲ್ಲಿನ ಕೆಲವು ಪ್ರಶ್ನೆಗಳು ದೋಷದಿಂದ ಕೂಡಿವೆ. ಪ್ರಶ್ನೆಪತ್ರಿಕೆಯ ವಿಭಾಗ 'ಡಿ'ನಲ್ಲಿ ಕೇಳಿರುವ 35ಬಿ ಪ್ರಶ್ನೆಯು ಪಠ್ಯದಲ್ಲಿ ಇಲ್ಲ. ಇದೇ ಪ್ರಶ್ನೆಯನ್ನು ಜುಲೈ 2010ರ ಪರೀಕ್ಷೆಯಲ್ಲಿ ಕೇಳಿ, ಅದಕ್ಕೆ ಕೃಪಾಂಕ ನೀಡಲಾಗಿತ್ತು. ಆದ್ದರಿಂದ ಈ ಬಾರಿಯೂ ಒಟ್ಟು 8 ಅಂಕಗಳು ವಿದ್ಯಾರ್ಥಿಗಳಿಗೆ ಕೃಪಾಂಕವಾಗಿ ದೊರೆಯುವ ಸಂಭವ ಇದೆ" ಎನ್ನುತ್ತಾರೆ ಉಪನ್ಯಾಸಕರೊಬ್ಬರು.
ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಚಕ್ರವರ್ತಿ ಮೋಹನ್ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ ಅವರು ಹೇಳಿದ್ದೇನೆಂದರೆ, "ಗಣಿತ ಪತ್ರಿಕೆ ಕಠಿಣವಾಗಿದೆ ಎಂದರೆ ಕಠಿಣವಾಗಿದೆ ಎಂದೇ ಅರ್ಥ. ಪತ್ರಿಕೆಯನ್ನು ಎಕ್ಸ್ ಪರ್ಟ್ ಕಮಿಟಿ ಸಿದ್ಧಪಡಿಸಿರುತ್ತದೆ. ಸಿಲಬಸ್ ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪಗಳು ಸರಿಯಲ್ಲ" ಎಂದು ಸ್ಪಷ್ಟಪಡಿಸಿದರು.
"ಇನ್ನೊಮ್ಮೆ ಎಕ್ಸ್ ಪರ್ಟ್ ಕಮಿಟಿ ಪ್ರಶ್ನೆಪತ್ರಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಿದೆ. ಒಂದು ವೇಳೆ ತಪ್ಪುಗಳೇನಾದರೂ ಕಂಡುಬಂದರೆ ಕೃಪಾಂಕ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ" ಎಂದು ಅವರು ತಿಳಿಸಿದರು. (ಒನ್ಇಂಡಿಯಾ ಕನ್ನಡ)