ಚುನಾವಣೆಗೆ ತಯಾರಿ : ಮತ್ತೊಂದು ಸಚಿವ ಸಂಪುಟ ಸಭೆ
ಸಂಪುಟ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಸಭೆಯ ನಂತರ ಸಚಿವರೊಬ್ಬರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವುದು ಸಂಪ್ರದಾಯ. ಮಂಗಳವಾರ ನಡೆದ ಸಭೆಯ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡದೆ ಸರ್ಕಾರ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದೆ.
ವಿಧಾನಸೌಧದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಆರಂಭವಾದ ಸಭೆ ರಾತ್ರಿ 10.30ವರೆಗೆ ನಡೆದಿದೆ ಎಂದು ತಿಳಿದು ಬಂದಿದೆ. ಸುಮಾರು 200 ವಿಷಯಗಳ ಕುರಿತಂತೆ ಚರ್ಚಿಸಿ ನೂತನ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಪಿಎಲ್ ಯೇತರ ಕುಟುಂಬಗಳಿಗೂ ವಿಸ್ತರಣೆ, ಬಜೆಟ್ ನಲ್ಲಿ ಘೋಷಿಸಿದ ಐದು ಸಿಗ್ನಲ್ ಮುಕ್ತ ಕಾರಿಡಾರ್ ಸ್ಥಾಪನೆಗೆ ಅನುಮೋದನೆ, ನೂತನ ಸಕ್ಕರೆ ಕಾರ್ಖನೆ ಸ್ಥಾಪನೆಗೆ ಒಪ್ಪಿಗೆ ಮುಂತಾದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಸಚಿವರ ಆಪ್ತರೊಬ್ಬರು ತಿಳಿಸಿದ್ದಾರೆ.
ಕೆಎಲ್ಇ ಗೆ ಭೂಮಿ : ಪ್ರತಿಷ್ಠಿತ ಕೆಎಲ್ಇ ಶಿಕ್ಷಣ ಸಂಸ್ಥೆಗೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕುವೆಂಪು ನಗರದಲ್ಲಿ ಎರಡು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಸಂಪುಟ ಹಸಿರು ನಿಶಾನೆ ತೋರಿದೆ. ಬೆಂಗಳೂರಿನ ರಾಜಾಜಿನಗರದ 2 ನೇ ಬ್ಲಾಕ್ ನಲ್ಲಿರುವ ಬಿಬಿಎಂಪಿ ಕ್ರೀಡಾಂಗಣದ ನಿರ್ವಹಣೆಯನ್ನು ಕೆಎಲ್ಇ ಸಂಸ್ಥೆಗೆ ವಹಿಸಲು ಸಭೆಯಲ್ಲಿ ಅನಿಮೋದನೆ ದೊರೆತಿದೆ.
ಜಲಾಶಯ ಆಧುನೀಕರಣ : ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಳಿಯ ಬಳಿ ಹೇಮಾವತಿ ನದಿಗೆ ನಿರ್ಮಿಸಿರುವ ಶ್ರೀರಾಮದೇವರ ಜಲಾಶಯವನ್ನು 30 ಕೋಟಿ ರೂ.ವೆಚ್ಚದಲ್ಲಿ ನವೀಕರಣ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಬಿಜಾಪುರದ ಸಂಗಾಪುರ ಗ್ರಾಮದಲ್ಲಿ ಮೆ.ಸೋಮೇಶ್ವರ ಶುಗರ್ಸ್ ಕಂಪನಿಗೆ ನೂತನ ಸಕ್ಕರೆ ಕಾರ್ಖನೆ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಉಳಿದಂತೆ ವಿವಿಧ ಮಠ ಮಾನ್ಯಗಳಿಗೆ ಭೂಮಿ ಮತ್ತು ಅನುದಾನ ಹಂಚಿಕೆ, ಕಂದಾಯ ಇಲಾಖೆಗೆ 13.86 ಕೋಟಿರೂ.ಗಳ ಆರ್ಥಿಕ ನೆರವು ಮುಂತಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಇದು ಕೊನೆಯ ಸಂಪುಟ ಸಭೆಯಲ್ಲ : ಮಂಗಳವಾರ ನಡೆಯುವುದು ಸರ್ಕಾರದ ಕೊನೆಯ ಸಂಪುಟ ಸಭೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದರು. ಆದರೆ, ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕವಾಗುವ ಮೊದಲು ಗುರುವಾರ ಮತ್ತೊಂದು ಸಂಪುಟ ಸಭೆ ನಡೆಸಲು ಸರ್ಕಾರ ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ.
ಚುನಾವಣಾ ಸಂಪುಟ ಸಭೆ : ಮುಖ್ಯಾಂಶಗಳು
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ