ಸ್ವಯಂ ನಿವೃತ್ತಿ ಬಯಸಿದ ಸಿದ್ದಯ್ಯ : ಕೆಜೆಪಿ ಸೇರ್ಪಡೆ ?
ಪ್ರಸ್ತುತ ಸಿದ್ಧಯ್ಯ ಅವರು ಬಿಬಿಎಂಪಿಯ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಸಿದ್ಧಯ್ಯ ನಿವೃತ್ತಿ ನೀಡುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಮಂಗಳವಾರ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಸರ್ಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ ಸಿದ್ದಯ್ಯ ಅವರಿಗೆ ಸ್ವಯಂ ನಿವೃತ್ತಿ ಈ ಬಾರಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ಸಿದ್ಧಯ್ಯ ಅವರು ರಾಜಕೀಯ ಪಕ್ಷ ಸೇರಲು ಆಲೋಚನೆ ನಡೆಸಿದ್ದಾರೆ. ಆದ್ದರಿಂದ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುರಿಂದ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ವಯಂ ನಿವೃತ್ತಿಗೆ ಅರ್ಜಿಯಲ್ಲಿ ಸ್ಪಷ್ಟ ಕಾರಣಗಳನ್ನು ಸಿದ್ಧಯ್ಯ ಅವರು ಉಲ್ಲೇಖಿಸಿಲ್ಲ.
ಬಿಡಿಎ, ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಸಿದ್ಧಯ್ಯ ಖಡಕ್ ಅಧಿಕಾರಿ ಎಂಬ ಹೆಸರು ಪಡೆದಿದ್ದಾರೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಸಿದ್ದಯ್ಯ, ಸರ್ಕಾರದ ಮಟ್ಟದಲ್ಲೂ ಅತ್ಯಂತ ಪ್ರಬಲವಾದ ಸಂಪರ್ಕಗಳನ್ನು ಹೊಂದಿರುವ ಐಎಎಸ್ ಅಧಿಕಾರಿಯಾಗಿದ್ದಾರೆ.
ಕೆಜೆಪಿಗೆ ಸಿದ್ಧಯ್ಯ : ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆತ್ಮೀಯರಾಗಿರುವ ಸಿದ್ಧಯ್ಯ ಕೆಜೆಪಿ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರ ಅಥವ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರದ ಉನ್ನತ ಅಧಿಕಾರಿಗಳು ರಾಜಕೀಯ ಸೇರುವುದು ಹೊಸದೇನಲ್ಲ. ಮಾಜಿ ಐಪಿಎಸ್ ಅಧಿಕಾರಿ ಶಂಕರ ಬಿದರಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಸಿದ್ಧಯ್ಯನವರು ರಾಜಕೀಯಕ್ಕೆ ಬಂದರೆ ಮತ್ತೊಬ್ಬರು ಅಧಿಕಾರಿ ರಾಜಕೀಯ ರಂಗ ಪ್ರವೇಶಿಸಿದಂತಾಗುತ್ತದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ