ವೀರಪ್ಪ ಮೋಯ್ಲಿ ಮೇಲೆ ಭ್ರಷ್ಟಾಚಾರದ ಕರಿನೆರಳು
ಕುಟುಂಬ ನಡೆಸುತ್ತಿರುವ ಮತ್ತು ಅವರೇ ಅಧ್ಯಕ್ಷರಾಗಿರುವ ಕಿಸಾನ್ ಸಭಾ ಟ್ರಸ್ಟಿ(ಕೆಎಸ್ಟಿ)ಗೆ ಐಟಿಸಿ ಕಂಪನಿಯಿಂದ 2012ರ ಸೆಪ್ಟೆಂಬರ್ನಲ್ಲಿ ಹಣ ಹರಿದುಬಂದಿದೆ. ಮೋಯ್ಲಿ ಅವರ ಮಗ ಹರ್ಷ ಮೋಯ್ಲಿ ಮತ್ತು ಅವರ ಬಿಸಿನೆಸ್ ಪಾರ್ಟನರ್ ಆಗಿರುವ ಸುಧೀರ್ ಕೆ. ಪ್ರಭು ಎಂಬುವರ ನಡುವೆ ನಡೆದ ಈಮೇಲ್ ಸರಣಿಯಿಂದ ಈ ಹಗರಣದ ಮಾಹಿತಿ ಸೋರಿಕೆಯಾಗಿದೆ.
"ಮುಂದಿನ 5 ವರ್ಷಗಳವರೆಗೆ ಕೆಎಸ್ಟಿಯ ಎಲ್ಲ ಖರ್ಚುವೆಚ್ಚಗಳನ್ನು ಐಟಿಸಿ ಕಂಪನಿ ಒಪ್ಪಿಕೊಂಡಿದೆ ಎಂದು ಡ್ಯಾಡ್ ದೃಢಪಡಿಸಿದ್ದಾರೆ. ಹಾಗಾಗಿ, ಕಾರ್ಕಳ ಮತ್ತು ಚಿಕ್ಕಬಳ್ಳಾಪುರದ ಶಾಲೆಗಳ 2011-12ರ ಎಲ್ಲ ಖರ್ಚುವೆಚ್ಚಗಳ ವಿವರಗಳನ್ನು ಐಟಿಸಿ ಕಂಪನಿಗೆ ಕೂಡಲೆ ಒದಗಿಸಬೇಕು" ಎಂದು ಪ್ರಭುಗೆ ಬರೆದ ಪತ್ರದಲ್ಲಿ ಹರ್ಷ ಮೊಯ್ಲಿ ತಿಳಿಸಿರುವುದು ಅವ್ಯವಹಾರವನ್ನು ಬಯಲಿಗೆಳೆದಿದೆ.
ಈ ಪತ್ರಕ್ಕೆ ಪ್ರತಿಯಾಗಿ ಹರ್ಷ ನಡೆಸುತ್ತಿರುವ ಕಂಪನಿಗಳ ನಿರ್ದೇಶಕರಾಗಿರುವ ಪ್ರಭು, "ಕಾರ್ಕಳದ ಶಾಲೆಗೆ ಮೂಲ ಬಂಡವಾಳ 1.71 ಕೋಟಿ ರು. ಮತ್ತು ಚಿಕ್ಕಬಳ್ಳಾಪುರದ ಶಾಲೆಗೆ 3.10 ಕೋಟಿ ರು. ಅಗತ್ಯವಿದೆ. ಅಲ್ಲದೆ ಪ್ರತಿವರ್ಷ ಶಾಲೆ ನಡೆಸಲು 50 ಲಕ್ಷ ರು. ಬೇಕಾಗುತ್ತದೆ. ಆದ್ದರಿಂದ 6 ಕೋಟಿ ರು. ಫಂಡಿಂಗ್ ಮಾಡಬೇಕೆಂದು ಕೇಳಬಹುದು" ಎಂದು ಉತ್ತರಿಸಿದ್ದಾರೆ.
ಇದಲ್ಲದೆ, ಹರ್ಷ ಅವರು ಹಣ ಹೂಡಿರುವ ಮೋಕ್ಷಯುಗ ಆಕ್ಸೆಸ್ ಕಂಪನಿಗೆ ಪೆಟ್ರೋಲಿಯಂ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಅಧ್ಯಕ್ಷ ಅನಂತ್ ರವಿ ಅವರನ್ನು ಸಲಹೆಗಾರರನ್ನಾಗಿ ಮಾಡಿದ್ದು ವೀರಪ್ಪ ಮೋಯ್ಲಿ ಅವರ ಮೇಲೆ ಸಂಶಯದ ನೆರಳು ಬೀಳುವ ಹಾಗೆ ಮಾಡಿದೆ. ಕಿಸಾನ್ ಸಭಾ ಟ್ರಸ್ಟ್ಗೆ ವೀರಪ್ಪ ಮೋಯ್ಲಿ ಅವರ ಹೆಂಡತಿ ಮಾಲತಿ ಮೋಯ್ಲಿ, ಮಗಳ ಹಂಸಾ ಮೋಯ್ಲಿ ಮತ್ತು ಅಮೆರಿಕಾದಲ್ಲಿ ಎಂಬಿಎ ಮಾಡಿರುವ ಮಗ ಹರ್ಷ ಮೋಯ್ಲಿ ಸದಸ್ಯರಾಗಿದ್ದಾರೆ.