ಬೇಳೂರು ಬಾಯಿಗೆ ಬೀಗ ಹಾಕಿ : ಹಾಲಪ್ಪ ದೂರು
ಸಾಗರದ ಕಿರಿಯ ವಿಭಾಗದ ಪ್ರಧಾನ ನ್ಯಾಯಾಲಯದಲ್ಲಿ ಸೋಮವಾರ ದೂರು ದಾಖಲಿಸಿದ ಹರತಾಳು ಹಾಲಪ್ಪ, ನನ್ನ ಮೇಲಿರುವ ಅತ್ಯಾಚಾರ ಪ್ರಕರಣ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಕೇವಲ ಆರೋಪಿ.
ಆದರೆ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ನಾನು ಅತ್ಯಾಚಾರಿ ಎಂದು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪತ್ರಿಕೆಗಳಲ್ಲೂ ಇದು ಪ್ರಕಟವಾಗಿದೆ. ಇದರಿಂದ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ಗೋಪಾಲಕೃಷ್ಣ ಅವರಿಗೆ ನಿರ್ದೇಶನ ನೀಡಬೇಕೆಂದು ನಾಲ್ಕು ಪತ್ರಿಕೆಗಳನ್ನು ಪ್ರತಿವಾದಿಯಾಗಿಸಿ ಮೊಕದ್ದಮೆ ಹೂಡಿದ್ದಾರೆ.
ಸೋಮವಾರ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ವಾದ ಮಂಡಿಸಿದ ಹಾಲಪ್ಪ ಪರ ವಕೀಲ ಅಶೋಕ್ ಜಿ.ಭಟ್, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಪ್ಪ ಅವರು ಇನ್ನೂ ಆರೋಪಿ ಮಾತ್ರ. ಪ್ರಕರಣದ ತೀರ್ಪನ್ನು ನ್ಯಾಯಾಲಯ ನೀಡಿಲ್ಲ.
ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಹಾಲಪ್ಪ ಅವರು ಅತ್ಯಾಚಾರಿ ಎಂದು ಮಾಧ್ಯಮಗಳ ಎದುರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಹಾಲಪ್ಪ ಅವರ ರಾಜಕೀಯ, ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ವಾದ ಮಂಡಿಸಿದರು.
ಮಾಧ್ಯಮಗಳಲ್ಲಿ ಹಾಲಪ್ಪ ಅವರ ಕುರಿತು ಇಂತಹ ಸಂಗತಿ ಪ್ರಕಟಗೊಳ್ಳುತ್ತಿರುವುದರಿಂದ ಸಾರ್ವಜನಿಕರು ತಪ್ಪಿತಸ್ಥ ಎಂಬ ಭಾವಿಸುವ ಸಂಭವಿದೆ. ಇದರಿಂದ ಅವರ ರಾಜಕೀಯ ಜೀವನಕ್ಕೆ ತೊಂದರೆ ಆಗಲಿದೆ, ರಾಜಕೀಯ ವರ್ಚಸ್ಸು ಹಾಳುಮಾಡುವ ದುರುದ್ದೇಶದಿಂದ ಬೇಳೂರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹೇಳಿಕೆ ನೀಡದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಸಾಕ್ಷಿಗಳಾಗಿ ನ್ಯಾಯಾಲಯದ ಮುಂದೆ ಬೇಳೂರು ನಡೆಸಿದ ಪತ್ರಿಕಾಗೋಷ್ಠಿಗಳ ವರದಿಗಳಿರುವ ದಿನಪತ್ರಿಕೆಗಳನ್ನು ದಾಖಲೆಗಳಾಗಿ ಒದಗಿಸಿದರು. ವಾದ ಆಲಿಸಿದ ನ್ಯಾಯಾಧೀಶ ಸತೀಶ್ ಜಿ.ಬಾಳಿ ತಾತ್ಕಾಲಿಕ ಪ್ರಕರಣ ಸಂಬಂಧಿಸಿದ ತೀರ್ಪನ್ನು ಮಾ.20ಕ್ಕೆ ಕಾಯ್ದಿರಿಸಿದರು.
ವಿಧಾನಸಭೆ ಚುನಾವಣಾ ಕಾವು ಹೆಚ್ಚಾಗಿ ಏರುತ್ತಿದ್ದು, ಉಭಯ ನಾಯಕರು ಪರಸ್ಪರ ಆರೋಪಗಳಲ್ಲಿ ತೊಡಗಿದ್ದಾರೆ. ಬಿಜೆಪಿ ತೊರೆದು ಕೆಜೆಪಿ ಸೇರಿರುವ ಹರತಾಳು ಹಾಲಪ್ಪ ಸೊರಬ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ಬಿಡುವುದಾಗಿ ಘೋಷಿಸಿರುವ ಬೇಳೂರು ಗೋಪಾಕೃಷ್ಣ ಯಾವ ಪಕ್ಷ ಸೇರುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. (ಕಾಮುಕರು ನನ್ನ ಕಾಲೆಳೆದಿದ್ದಾರೆ: ಗೋಪಾಲಕೃಷ್ಣ )
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ