ಯುವಕನ ಕಪಾಳಕ್ಕೆ ಹೊಡೆದ ಕಾಂಗೈ ನರೇಂದ್ರಸ್ವಾಮಿ
ಮಂಡ್ಯ, ಮಾ.18: ಇನ್ನೇನು ಚುನಾವಣೆ ವೇಳಾಪಟ್ಟಿ ಇದೇ ವಾರ ಘೋಷಣೆಯಾಗಲಿದೆ. ಚುನಾವಣೆ ಕಾವು ಏರತೊಡಗಿದೆ. ಆದರೆ ರಾಜ್ಯದಲ್ಲಿ ಚುನಾವಣೆ ಪೂರ್ವ ನಡೆಯುತ್ತಿರುವ ಘಟನೆಗಳು ಬೆಚ್ಚಿಬೀಳಿಸುವಂತಿದೆ. ಒಂದೆಡೆ ನೀಲಿಚಿತ್ರ ಪ್ರೇಕ್ಷಕ ಸಿಸಿ ಪಾಟೀಲ್ ಅಂಗರಕ್ಷಕನಿಂದಲೇ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಮಲಗಿದ್ದರೆ ಮತ್ತೊಂದೆಡೆ ಮಂಡ್ಯದಲ್ಲಿ ಮತ್ತೊಬ್ಬ ಶಾಸಕ ತನ್ನ 'ಕರಾ'ಮತ್ತು ತೋರಿ, ಅಮಾಯಕ ಯುವಕನ ಕೆನ್ನೆಗೆ ಫಟೀರನೆ ಬಾರಿಸಿ, ತಮ್ಮ ದರ್ಪ ತೋರಿದ್ದಾರೆ.
ಯಾರಪ್ಪಾ ಆ ಮಂಡ್ಯದ ಕಲಿ ಅಂದರೆ ಕಾಂಗ್ರೆಸ್ ಹೊಸಿಲಿನ ಮೇಲೆ ನಿಂತಿರುವ ಪಕ್ಷೇತರ ಶಾಸಕ ನರೇಂದ್ರಸ್ವಾಮಿ ಎಂಬ ಉತ್ತರವಿದೆ. ಈತನ ಉತ್ತರಪೌರುಷ ಹೇಗಿದೆಯೆಂದರೆ 'ಗ್ರಾಮಕ್ಕೆ ವಿದ್ಯುತ್ ಮತ್ತು ಕುಡಿಯುವ ನೀರು ಸರಿಯಾಗಿ ನೀಡುತ್ತಿಲ್ಲ ಅಂದ ಮೇಲೆ ಜನಪ್ರತಿನಿಧಿಯಾಗಿ ನೀವೇನು ಮಾಡುತ್ತಿದ್ದೀರಿ?' ಎಂದು ಬಿಸಿರಕ್ತದ ಯುವಕನೊಬ್ಬ ಕೇಳಿದ್ದೇ ತಡ, ಅದೆಲ್ಲಿಂದ ಉರಿದುಕೊಂಡರೋ ಶಾಸಕ ಸಾಹೇಬರು ಫಟೀರಂತ ಆ ಯುವಕನ ಕೆನ್ನೆಗೆ ಬಾರಿಸಿಯೇ ಬಿಟ್ಟರು.
ಯುವಕ ಏಟು ತಿಂದಿದ್ದನ್ನು ನೋಡಿ ಕರುಳು ಚುರುಕ್ ಎನಿಸಿದ ಹಿರಿಯರೊಬ್ಬರು 'ಅಲ್ಲ, ಪಕ್ಷೇತರ ನರೇಂದ್ರ ಇನ್ನೂ ಕಾಂಗ್ರೆಸ್ ಸೇರಿಲ್ಲ, ಆಗಲೇ ಕಾಂಗ್ರೆಸ್ ಸಂಸ್ಕೃತಿ ಮೈಗೂಡಿಸಿಕೊಂಡರಾ?' ಎಂದು ಪ್ರಶ್ನಿಸಿದ್ದಾರೆ. Shame on you Mr. MLA.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ದಿಗಿಲಿಗೆ ಬಿದ್ದು ಮುಖ್ಯಮಂತ್ರಿಯಾದಿಯಾಗಿ ಶಾಸಕ ಮಹಾಮಹಿಮರು ಆತುರಾತುರವಾಗಿ ಹೋದಕಡೆಯಲ್ಲೆಲ್ಲಾ ತಮ್ಮ ಶಂಕು ನೆಡುತ್ತಿದ್ದಾರೆ. ಗಮನಿಸಿ, ಇದು ಬರೀ ಶಂಕುವಿನ ಸ್ಥಾಪನೆಯಷ್ಟೇ. ಪೂರ್ಣಗೊಂಡ ಕಾಮಗಾರಿ ಯೋಜನೆಗಳಲ್ಲ.
ಶಾಸಕ ಪಿಎ ನರೇಂದ್ರ ಸ್ವಾಮಿಯೂ ಇದಕ್ಕೆ ಹೊರತಲ್ಲ. ಶನಿವಾರ ಏನಾಯಿತೆಂದರೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಹರಿಜನ ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಗುದ್ದಲಿ ಪೂಜೆಯನ್ನು ಆತುರಾತುರವಾಗಿ ನೇರವೇರಿಸಲು ಮುಂದಾಗಿದ್ದಾರೆ.
ಗ್ರಾಮದ ಗೋಪಾಲ ಬಿನ್ ಕುಂಡಿ ಚನ್ನೇಗೌಡ 'ಸ್ವಾಮಿ ಕುಡಿಯೋಕ್ಕೆ ನೀರಿಲ್ಲ, ವಿದ್ಯುತ್ ಇಲ್ಲ. ಶಾಸಕರಾಗಿ ನೀವೇನು ಮಾಡುತ್ತಿದ್ದೀರಿ?' ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಅಷ್ಟೇ, ಅದೆಲ್ಲಿತ್ತೋ ಕೋಪ ಶಾಸಕ ಸಾಹೇಬರು ಆತನಿಗೆ ಸಮಾ ಬಾರಿಸಿದ್ದಾರೆ.