ಸಂತಾನ ಹರಣ ಚಿಕಿತ್ಸೆಗೆ ಕಳಿಸಿ ನ್ಯಾನೋ ಗಳಿಸಿ
ಖಾಸಗಿ ಕಂಪನಿಗಳು ತಮ್ಮ ಉತ್ಪನ್ನ ಮಾರಾಟ ಮಾಡಲು ವಿವಿಧ ರೀತಿಯ ಜಾಹೀರಾತು ತಂತ್ರಗಳನ್ನು ಬಳಸುವುದು ಅನಿವಾರ್ಯ. ಕೆಲವೊಮ್ಮೆ ಜಾಹೀರಾತುಗಳು ಸಭ್ಯತೆಯ ಎಲ್ಲೆ ಮೀರುವುದು ಇದೆ. ಆದರೆ ಸರ್ಕಾರವೇ ನೀಡಿರುವ ಒಂದು ಆಫರ್ ಎಲ್ಲರನ್ನು ದಂಗು ಬಡಿಸಿದೆ.
'ಕಾರು ಖರೀದಿಸುವ ಆಸೆಯಿದೆಯೇ? ಹಾಗಿದ್ದರೆ 500 ಜನರನ್ನು ಸಂತಾನಶಕ್ತಿಹರಣ ಚಿಕಿತ್ಸೆಗೆ ಕರೆದುಕೊಂಡು ಬನ್ನಿ ನ್ಯಾನೋ ಕಾರು ಓಡಿಸಿಕೊಂಡು ಹೋಗಿ" ಎಂಬ ಜಾಹೀರಾತು ಭಾರಿ ಸಂಚಲನ ಸೃಷ್ಟಿಸಿದೆ. 50 ಜನರನ್ನು ಕರೆತಂದರೆ ಫ್ರಿಡ್ಜ್, 25 ಮಂದಿಯನ್ನು ಸಂತಾನಶಕ್ತಿಹರಣ ಚಿಕಿತ್ಸೆಗೆ ಕರೆದುಕೊಂಡು ಬಂದರೆ ಆ ವ್ಯಕ್ತಿಗೆ 10 ಗ್ರಾಂ ಚಿನ್ನದ ಪದಕ ನೀಡುವ ಆಫರ್ ಅನ್ನು ಮಧ್ಯಪ್ರದೇಶ ಸರ್ಕಾರ ನೀಡಿದೆ.
ಹಿಸ್ಟರಿ ರಿಪೀಟ್ಸ್ : ಸಂಜಯ್ ಗಾಂಧಿ ಕಾಲದಲ್ಲಿ ಜಾರಿಗೊಂಡ ನಸ್ ಬಂದಿ, ಸಂತಾನಹರಣ ಚಿಕಿತ್ಸೆ ಭಾರಿ ವಿವಾದಕ್ಕೆ ಒಳಗಾಗಿತ್ತು. ದೆಹಲಿಯ ಸ್ಲಮ್ ಗಳಿರುವ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುಲ್ಲೆಬ್ಬಿತ್ತು. ಆಗ ಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗೆ ಮರ್ಫಿ ರೇಡಿಯೋ ಆಸೆ ತೋರಿಸಲಾಗಿತ್ತು. ಈಗ ನ್ಯಾನೋ ಕಾರು ಹುಚ್ಚು ಹಿಡಿಸಲಾಗಿದೆ. ಹಿಂದೊಮ್ಮೆ ಸಂಜಯ್ ಪುತ್ರ ವರುಣ್ ಕೂಡಾ ಮಾರುತಿ ಕಾರು ಆಫರ್ ನೀಡಿದ್ದ ಸುದ್ದಿ ಹಬ್ಬಿತ್ತು. ಆದರೆ, ಅಷ್ಟು ಕೋಲಾಹಲ ಎಬ್ಬಿಸಿರಲಿಲ್ಲ. ನಸ್ ಬಂದಿ ಕಾರ್ಯಕ್ರಮ ಹಾಗೂ ಆಫರ್ ಗಳು ಹೊಸ ವಿಚಾರವೇನಲ್ಲ.
ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ ಈ ಕೊಡುಗೆಯನ್ನು ನೀಡುತ್ತಿದೆ. ಆದರೆ ನ್ಯಾನೋ ಕಾರು ಮತ್ತು ಫ್ರಿಡ್ಜ್, ಬಂಗಾರದ ಪದಕ ಪಡೆಯುವ ಆಸೆಯಲ್ಲಿ ಕೆಲ ಮಧ್ಯವರ್ತಿಗಳು ನಿರ್ಗತಿಕರು, ಅನಾಥರು, ಕುಡುಕರು, ಅಂಗವಿಕಲರು, ಅವಿವಾಹಿತರನ್ನು ಕರೆತಂದು ಸಂತಾನಹರಣ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ. ಹಣದ ಆಮಿಷಕ್ಕೆ ಬಲಿಯಾಗುತ್ತಿರುವ ವ್ಯಕ್ತಿಗಳು ತಮ್ಮ ಪುರುಷತ್ವ ಕಳೆದುಕೊಂಡು ಪರಿತಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ವೈದ್ಯರು ದಿನವೊಂದಕ್ಕೆ ಸುಮಾರು 30ರಿಂದ 50ರ ತನಕ ಸಂತಾನಹರಣ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಕೆಲವು ಗಂಟೆಗಳಲ್ಲೇ ಚಿಕಿತ್ಸೆಗ್ ಒಳಗಾದ ವ್ಯಕ್ತಿ ಮೊದಲಿನಂತೆ ಕಾರ್ಯ ನಿರ್ವಹಿಸಬಹುದಾಗಿದೆ. ದಿನವೊಂದಕ್ಕೆ 500ಕ್ಕೂ ಹೆಚ್ಚು ಶಸ್ತ್ರಕ್ರಿಯೆ ನಡೆಸಿದ ಉದಾಹರಣೆಗಳು ಸಿಕ್ಕಿದೆ. ಹಲವು ಕಡೆ ಬೆದರಿಕೆ ಒಡ್ಡಿ ಜನರನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ ಎಂದು ಸ್ಥಳೀಯ ಎನ್ ಜಿಒ ಹೇಳಿದೆ.
ಬೆದರಿಕೆ : ಸಂತಾನಹರಣ ಚಿಕಿತ್ಸೆಗೆ ಒಳಪಡದಿದ್ದರೆ ನಿಮ್ಮ BPL ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಯಾವುದೇ ಸರ್ಕಾರಿ ಸೌಲಭ್ಯ ದೊರೆಯುವುದಿಲ್ಲ ಎಂದು ಬೆದರಿಸಲಾಗುತ್ತಿದೆ. ಬೈಗಾ, ಬವಾನಿ, ಖಾರ್ ಗೋನ್, ಝಾಬುವಾ ಮುಂತಾದ ಬುಡಕಟ್ಟು ಜನಾಂಗದವರನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಮೂವರು ಸಾವನ್ನಪ್ಪಿರುವ ಸುದ್ದಿ ಮುಚ್ಚಿಹಾಕಲಾಗಿದೆ. ಮಧ್ಯವರ್ತಿಗಳಿಗೆ ಮಾ.31 ರ ಟಾರ್ಗೆಟ್ ನೀಡಲಾಗಿದೆಯಂತೆ,
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ