ಪಾಟೀಲ್ ಗುಂಡೇಟು: ಚುನಾವಣಾ ಹಿಂಸಾಚಾರಕ್ಕೆ ಮುನ್ನುಡಿ
ಇದು ಚುನಾವಾಣೆ ಪೂರ್ವ ಹಿಂಸಾಚಾರಕ್ಕೆ ಮುನ್ನುಡಿಯಂತಿದ್ದು, ಮುಂಬರುವ ಚುನಾವಣೆ ಈ ಬಾರಿ ರಣರಂಗವಾಗಲಿದೆ ಎಂಬ ಆತಂಕ ಮೂಡಿಸಿದೆ. ಅದರಲ್ಲೂ ಶಾಸಕ ಪಾಟೀಲರು ಮತ್ತೆ ಬಿಜೆಪಿಯಿಂದ ಸ್ಪರ್ಧಿಸಬಾರದೆಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಹಿಂದಿನ ಸುದ್ದಿ: ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿಸಿ ಪಾಟೀಲಗೆ ಗುಂಡೇಟು ಬಿದ್ದಿದೆ. ಅಂಗರಕ್ಷಕನ ಅಜಾಗರೂಕತೆಯಿಂದ ಭಾನುವಾರ ರಾತ್ರಿ 10 ಗಂಟೆ ವೇಳೆಯಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಪಾಟೀಲರ ಹೊಟ್ಟೆ ಭಾಗಕ್ಕೆ 2 ಗುಂಡೇಟು ಬಿದ್ದಿದೆ. ಅವರ ದೇಹಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ಹುಬ್ಬಳ್ಳಿ ಲೈಫ್ ಲೈನ್ ಆಸ್ಪತ್ರೆಗೆ ಸೇರಿಸಲಾಗಿದೆ.
ಭಾನುವಾರ ರಾತ್ರಿ ಗುಂಡೇಟು ತಗುಲಿ ಗಾಯಗೊಂಡ ನರಗುಂದ ಶಾಸಕ ಪಾಟೀಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಳಗಿನ ಜಾವ 4 ಗಂಟೆಯಲ್ಲಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಮಂದಿ ತಜ್ಞ ವೈದ್ಯರು ಸತತವಾಗಿ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿದ್ದು, ಶಾಸಕರ ಸ್ಥಿತಿ ಏರುಪೇರಾಗುತ್ತಿದೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಆತಂಕಗೊಂಡ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಹೋದ್ಯೋಗಿ ಪಾಟೀಲರ ಆರೋಗ್ಯ ವಿಚಾರಿಸಲು ಲೈಫ್ ಲೈನ್ ಆಸ್ಪತ್ರೆಗೆ ದೌಡಾಯಿಸಿದರು. ಖುದ್ದಾಗಿ ಪಾಟೀಲರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಶೆಟ್ಟರ್ ಅವರು ಶಾಸಕ ಪಾಟೀಲರ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಹೇಗಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ' ಎಂದು ತಿಳಿಸಿದ್ದಾರೆ.
ನಡೆದಿದ್ದೇನು?: ಶಾಸಕ ಪಾಟೀಲರು ಭಾನುವಾರ ರಾತ್ರಿ ಮೆಣಸಗಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಶಾಸಕ ಪಾಟೀಲರು ಬಿಜೆಪಿಯಿಂದ ಸ್ಪರ್ಧಿಸಬಾರದು ಎಂದೂ ತಾಕೀತು ಮಾಡುತ್ತಿದ್ದರು ಎನ್ನಲಾಗಿದೆ.
ಆಗ ಕೆಲಕಾಲ ಶಾಸಕರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಕೆಲವರು ತೀರಾ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವರ ಗನ್ ಮ್ಯಾನ್ ಮಂಜುನಾಥ್ ಅವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತನ್ನ ಬಳಿಯಿದ್ದ ಗನ್ ಹೊರತೆಗೆಯುವ ವೇಳೆ ಗುಂಡು ಹಾರಿದ್ದು ಅದು ನೇರವಾಗಿ ಪಾಟೀಲರಿಗೆ ತಗುಲಿದೆ.
ಬೆಂಬಲಿಗರಲ್ಲಿ ಆತಂಕ, ಆಕ್ರೋಶ: ಗುಂಡೇಟು ಘಟನೆಯಿಂದ ರೊಚ್ಚಿಗೆದ್ದ ಶಾಸಕ ಪಾಟೀಲ್ ಅವರ ಬೆಂಬಲಿಗರು ನರಗುಂದದಲ್ಲಿ ರಸ್ತೆ ತಡೆ ನಡೆಸಿ ತನಿಖೆಗೆ ಆಗ್ರಹಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣವಿತ್ತು. ಘಟನೆ ಖಂಡಿಸಿ ನರಗುಂದದಲ್ಲಿ ಭಾನುವಾರ ರಾತ್ರಿ ರಸ್ತೆ ಮೇಲೆ ಟೈರುಗಳಿಗೆ ಬೆಂಕಿ ಹಚ್ಚಿ ಶಾಸಕರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಸಿಸಿ ಪಾಟೀಲರ ಮೇಲೆ ಯಾರಿಗೂ ವೈಯಕ್ತಿಕ ದ್ವೇಷ ಇಲ್ಲ. ಗನ್ ಮ್ಯಾನ್ ಅಜಾಗರೂಕತೆಯಿಂದ ಗುಂಡು ತಗುಲಿದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ' ಎಂದು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದ್ದಾರೆ. ಆದರೆ ಘಟನೆಯ ಸಂದರ್ಭದಲ್ಲಿ ವಿದ್ಯುತ್ ಇಲ್ಲದಿರುವುದು ಮತ್ತು ಕಾರ್ಯಕ್ರಮ ನಡೆದ ಸ್ಥಳದಲ್ಲಿ ರಾಜಕೀಯ ಉದ್ವಿಗ್ನ ಸ್ಥಿತಿ ನೆಲೆಸಿತ್ತು ಎಂದೂ ಹೇಳಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ