ರೈಲ್ವೆ ನಿಲ್ದಾಣ ಸ್ಪೋಟಿಸಲು ಉಗ್ರರ ಸಂಚು
ಹೈದರಾಬಾದ್ ಸರಣಿ ಸ್ಪೋಟದ ಆರೋಪಿಗಳು ಮತ್ತು ಬೆಂಗಳೂರಿನಲ್ಲಿ ಬಂಧಿಸಲಾದ ದೇಶದ ವಿವಿಧ ಗಣ್ಯರ ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರರು, ವಿಚಾರಣೆ ವೇಳೆ ರೈಲ್ವೆ ನಿಲ್ದಾಣಗಳನ್ನು ಸ್ಪೋಟಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ನೀಡಿದ್ದಾರೆ.
ಕರಾಚಿ ಮತ್ತು ಸೌದಿ ಅರೇಬಿಯಾದಲ್ಲಿ ಕುಳಿತಿರುವ ಲಷ್ಕರ್ ಉಗ್ರಗಾಮಿ ಸಂಘಟನೆಯ ಪ್ರಮುಖರು, ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಾದ ದೆಹಲಿ, ಮುಂಬೈ, ಚಂಡೀಘಢ, ಪ್ರತಾಪಗಢ ಹಾಗೂ ಮಿರ್ಜಾಪುರ ನಿಲ್ದಾಣಗಳಲ್ಲಿ ಸ್ಪೋಟಗಳನ್ನು ನಡೆಸುವಂತೆ ಸೂಚಿಸಿದ್ದರು ಎಂದು ವಿಚಾರಣೆವೇಳೆ ಒಪ್ಪಿಕೊಂಡಿದ್ದಾರೆ.
ಉಗ್ರರ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ಮತ್ತು ಕೇಂದ್ರ ಗುಪ್ತಚರ ಇಲಾಖೆಗಳು ಬಂಧಿತ ಉಗ್ರರಿಂದ ಅಧಿಕ ಮಾಹಿತಿ ಕಲೆ ಹಾಕುತ್ತಿದ್ದು, ಸಂಚಿನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದ ಸೋಯಬ್ ಮಿರ್ಜಾ, ಅಬ್ದುಲ್ ಹಕೀಮ್ ಜಮಾದಾರ್ ಮತ್ತು ಹೈದರಾಬಾದ್ ಬಾಂಬ್ ಸ್ಪೋಟದ ರೂವಾರಿಗಳು ಈ ಆತಂಕಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಇವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.
2002ರ ಗುಜರಾತ್ ನ ಅಕ್ಷರಧಾಮ ದೇವಾಲಯದ ದಾಳಿಯ ರೂವಾರಿ ಅಬ್ದುಲ್ ರೆಹಮಾನ್ ದೇಶದ ವಿವಿಧ ನಿಲ್ದಾಣಗಳ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದ ಎಂದು ತಿಳಿದು ಬಂದಿದೆ. ಸದ್ಯ ಈತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ