ಲಕ್ಷ್ಮಣ ಸವದಿ ಸಂಬಂಧಿ ಹಲ್ಲೆಕೋರರು ಬಲೆಗೆ
ತಾನು ಮದುವೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದ ಯುವತಿಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಿಯವಾಗಿದ್ದನ್ನು ಅರಗಿಸಿಕೊಳ್ಳಲಾಗದೆ ಆಕೆಯ ಭಾವಿ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಆರೋಪಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿಶ್ವೇಶ್ವರಯ್ಯ ಲೇಔಟ್ನ ವಿನಯ್(23), ಶ್ರೀನಗರದ ಮಾರುತಿ ಬ್ಲಾಕ್ ನಿವಾಸಿ ಮಂಜ(21) ಮತ್ತು ಗಿರಿನಗರದ ಶಿವಪ್ರಸಾದ್(21) ಬಂಧಿತರು.
ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರ ಅಣ್ಣ ಕಾಶಪ್ಪ ಅವರ ಮಗ ಶಿವಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಈ ಮೂವರು ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರ ಅಣ್ಣನ ಮಗನಾದ ಅಥಣಿ ಮೂಲದ ಶಿವಕುಮಾರ ಸವದಿ ಎಂಬಾತನ ಮದುವೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ಯುವತಿ ಜೊತೆ ನಿಶ್ಚಯವಾಗಿತ್ತು.
ಫೇಸ್ ಬುಕ್ ಮುಖಾಂತರ ಈ ಮೊದಲೇ ಯುವತಿಯನ್ನು ವಿನಯ್ ಎಂಬಾತ ಪರಿಚಯ ಮಾಡಿಕೊಂಡಿದ್ದು ಈಕೆಯನ್ನು ಮದುವೆಯಾಗಲು ಮನಸ್ಸು ಮಾಡಿದ್ದ. ಆದರೆ ಈ ವಿಷಯ ಯುವತಿಗೆ ತಿಳಿಸಿರಲಿಲ್ಲ. ಇದು ಒನ್ ಸೈಡ್ ಲವ್ ಸ್ಟೋರಿಯಾಗಿತ್ತು.
ಈ ನಡುವೆ ಈಕೆಯ ವಿವಾಹ ಅಥಣಿಯ ಶಿವಕುಮಾರ್ ಸವದಿ ಅವರೊಂದಿಗೆ ನಿಶ್ಚಯವಾಗಿ, ಇಬ್ಬರ ನಿಶ್ಚಿತಾರ್ಥವು ನಡೆದು ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ವಿನಯ್ ಈ ಸುದ್ದಿ ತಿಳಿದು ಶಿವಕುಮಾರ್ ಸವದಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಫೆ.27ರಂದು ತನ್ನ ಸಹಚರನಾದ ಮಂಜನ ಜೊತೆ ಬೆಂಗಳೂರಿನಿಂದ ಅಥಣಿಗೆ ಹೋಗಿ ಕ್ಲೋರೋಫಾರಂ ಉಪಯೋಗಿಸಿ ಸಾಯಿಸಲು ಯತ್ನಿಸಿದ್ದ. ಆದರೆ, ಶಿವಕುಮಾರ್ ಸವದಿ ಪ್ರತಿರೋಧ ವ್ಯಕ್ತಪಡಿಸಿ ಪಾರಾಗಿದ್ದರು.
ಮಾ.5 ರಂದು ಶಿವಕುಮಾರ್ ಸವದಿಯು ತನ್ನ ಭಾವಿ ಪತ್ನಿಯನ್ನು ಹಾಸ್ಟೆಲ್ನಲ್ಲಿ ಬಿಟ್ಟು ಅವರು ತಮ್ಮ ಹ್ಯುಂಡೈ ಐ10 ಕಾರಿನಲ್ಲಿ ವಾಪಾಸ್ಸಾಗುವಾಗ ಬೈಕ್ನಲ್ಲಿ ವಿನಯ್, ಮಂಜ ಮತ್ತು ಶಿವಪ್ರಸಾದ್ ಹಿಂಬಾಲಿಸಿ ಅಪಘಾತ ಮಾಡುವ ರೀತಿ ಅಡ್ಡ ಬಂದು ನಾಟಕವಾಡಿ ಶಿವಕುಮಾರ್ ಸವದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದರು. ಅದೃಷ್ಟವಶಾತ್ ಸವದಿ ಮತ್ತೊಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದು ಪೊಲೀಸರ ಮುಂದೆ ವಿಚಾರಣೆ ವೇಳೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾರೆ.
ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಜೆ.ಸಿ.ನಗರದ ಉಪವಿಭಾಗದ ಎಸಿಪಿ ಓಂಕಾರಯ್ಯ, ಇನ್ಸ್ಪೆಕ್ಟರ್ಗಳಾದ ತನ್ವೀರ್ ಅಹಮದ್, ಸತೀಶ್, ಮಾಲತೇಶ್, ಸಬ್ಇನ್ಸ್ಪೆಕ್ಟರ್ ಅಮೂಲ್ ಕಾಳೆ ಮತ್ತು ಸಿಬ್ಬಂದಿ ವರ್ಗದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರು ಜ್ಯೋತಿ ಪ್ರಕಾಶ್ ಮಿರ್ಜಿ ಮುಕ್ತ ಕಂಠದಿಂದ ಶ್ಲಾಘಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ