ಕರ್ನಾಟಕದಲ್ಲಿ ಮತ್ತೊಂದು ಪಕ್ಷ ಪ್ರಾರಂಭ
ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಎಂಬುದು ಬಿಎಜೆಪಿ ಪಕ್ಷದ ಸಂಪೂರ್ಣ ಹೆಸರು. ಗುರುವಾರ ಈ ನೂತನ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು ಮಾತ್ರವಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಟಿ.ರಾಜಣ್ಣ ಈ ನೂತನ ಬಿಎಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷರು. ಗುರುವಾರ ಬೆಂಗಳೂರಿನಲ್ಲಿ ನಡೆಸ ಸರಳ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾಗಿ ರಾಜಣ್ಣ ಅಧಿಕಾರ ವಹಿಸಿಕೊಳ್ಳುವುದರ ಮೂಲಕ ಪಕ್ಷವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಪ್ರಾದೇಶಿಕ ಸಮಸ್ಯೆಗಳನ್ನು ನಿವಾರಿಸುವುದು ಈ ಪಕ್ಷದ ಮುಖ್ಯ ಉದ್ದೇಶ. ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ರಕ್ಷಣೆ ಮತ್ತು ಅಭಿವೃದ್ಧಿಗೆ ಈಗಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮನ್ನಣೆ ನೀಡುತ್ತಿಲ್ಲ ಆದ್ದರಿಂದ ನೂತನ ಪಕ್ಷ ಸ್ಥಾಪಿಸಿದ್ದೇವೆ ಎಂದು ರಾಜಣ್ಣ ಹೇಳಿದರು.
ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಬಿಎಜೆಪಿ ಪಕ್ಷವನ್ನು ಬೆಳೆಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಶೋಷಣೆಗೆ ಒಳಗಾದ ಜನರು ತಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ರಾಜಣ್ಣ ಭರವಸೆ ಹೊಂದಿದ್ದಾರೆ.
ಇಸ್ರೋ ನಿವೃತ್ತ ವಿಜ್ಞಾನಿ ಆರ್ .ಬಿ.ಸಿಂಗ್, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂತಾದವರು ನೂತನ ಪಕ್ಷಕ್ಕೆ ಶುಭ ಹಾರೈಸಿದರು. ಡಿ.ದಯಾನಂದ ಬಿಎಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಪಕ್ಷದ 28 ಅಂಶಗಳ ಪ್ರಣಾಳಿಕೆಯನ್ನು ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರಾಣಾಳಿಕೆ ಮುಖ್ಯಾಂಶಗಳು
* 10ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ
* ಗುಡಿ ಕೈಗಾರಿಕೆಗಳ ಪುನಶ್ಚೇತನ
* ರೈತರಿಗೆ ಗರಿಷ್ಠ ಮಟ್ಟದ ಸಾಲ ನೀಡುವುದು
* ರಾಜ್ಯದ ಗ್ರಾಮಗಳ ರಕ್ಷಣೆಗಾಗಿ ಪ್ರತ್ಯೇಕ ದಳಗಳ ಸ್ಥಾಪನೆ
* ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪಾಲಿಟೆಕ್ನಿಕ್ ಕೇಂದ್ರಗಳ ಸ್ಥಾಪನೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ