ಭ್ರಷ್ಟರಿಗೆ ಶಾಕ್ : ನಾಲ್ಕು ಕಡೆ ಲೋಕಾಯುಕ್ತ ದಾಳಿ
ಸಹಕಾರಿ ಸಂಘದ ಹೆಚ್ಚುವರಿ ಲೆಕ್ಕಾಧಿಕಾರಿ ಸಿ.ಎಸ್.ವಿರೇಶ್, ಬಿಬಿಎಂಪಿಯ ಡಿ ಗ್ರೂಫ್ ನೌಕರ ಕರಿಯಪ್ಪ, ಬಿಬಿಎಂಪಿ ಬಿಲ್ ಕಲೆಕ್ಟರ್ ಕೃಷ್ಣ ಹಾಗೂ ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಅಂಕಪ್ಪ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಳಗ್ಗೆ ಬಿಬಿಎಂಪಿಯ ಡಿ ಗ್ರೂಪ್ ನೌಕರ ಕರಿಯಪ್ಪ ಅವರ ಯಲಹಂಕ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಕರಿಯಪ್ಪ ಅವರ ಬಳಿ 2.44 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಬ್ಯಾಂಕ್ ಖಾತೆ ಮತ್ತು ಲಾಕರ್ ಗಳನ್ನು ಇನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸಹಕಾರ ಸಂಘಗಳ ಅಪರ ನಿಬಂಧಕರಾದ ಸಿ.ಎಸ್.ವಿರೇಶ್ ಅವರ ರಾಜರಾಜೇಶ್ವರಿ ನಗರದ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 2.27 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ವಿರೇಶ್ ಅವರಿಗೆ ಸೇರಿದ ಲಾಕರ್, ಜಮೀನಿನ ದಾಖಲೆ ಪತ್ರಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.
ಶ್ರೀನಗರದ ನಿವಾಸಿಯಾದ ಬಿಬಿಎಂಪಿ ಬಿಲ್ ಕಲೆಕ್ಟರ್ ಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 2.04 ಕೋಟಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಇವರಿಗೆ ಸೇರಿದ ಪುಟ್ಟೇನಹಳ್ಳಿ ನಿವಾಸದಲ್ಲಿ ಪರೀಶೀಲನೆ ನಡೆಸುತ್ತಿದ್ದು, ಒಟ್ಟಾರೆ ಆಸ್ತಿಯ ಮೌಲ್ಯ ಸಂಪೂರ್ಣವಾಗಿ ತಿಳಿದು ಬಂದಿಲ್ಲ.
ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಅಂಕಪ್ಪ ಅವರ ನಾಗರಭಾವಿ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 1.04 ಕೋಟಿ ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಮೊದಲನೇ ಹಂತದ ಸರ್ಕಾರಿ ಅಧಿಕಾರಿಗಳ ಮೇಲೆ ಯಾವಾಗಲೂ ದಾಳಿ ನಡೆಸುತ್ತಿದ್ದ ಅಧಿಕಾರಿಗಳು ಈ ಬಾರಿ ಡಿ ಗ್ರೂಪ್ ನೌಕರರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಎಲ್ಲಾ ಅಧಿಕಾರಿಗಳಿಗೆ ಸೇರಿದ ಆಸ್ತಿಗಳ ಮೌಲ್ಯ ಮಾಪನ ಮುಂದುವರೆದಿದ್ದು, ಸಂಪೂರ್ಣ ಚಿತ್ರಣ ಇನ್ನೂ ಲಭ್ಯವಾಗಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ