ಭೂ ಹಗರಣದ ಸುಳಿಯಲ್ಲಿ ಡಿ.ಸುಧಾಕರ್
ಜಿ ಕೆಟಗರಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಕೀಲ ವಾಸುದೇವ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ಎಚ್.ಎಸ್.ಕೆಂಪಣ್ಣ ಅವರ ವಿಭಾಗೀಯ ಪೀಠ ನ್ಯಾಯಮೂರ್ತಿ ಪದ್ಮರಾಜ್ ನೇತೃತ್ವದ ಸಮಿತಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿತ್ತು.
ಬುಧವಾದ ಸಮಿತಿಗೆ ವಕೀಲ ವಾಸುದೇವ್, ಮಾಜಿ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಅವರು ಸುಳ್ಳು ಪ್ರಮಾಣ ಪತ್ರ ನೀಡಿರುವ ಬಗ್ಗೆ ದಾಖಲೆ ಸಲ್ಲಿಸಿದ್ದಾರೆ. ಜಿ ಕೆಟಗರಿ ನಿವೇಶನ ಪಡೆಯುವಾಗ ಸುಧಾಕರ್ ತಮ್ಮ ಹೆಸರಿನಲ್ಲಿ ಬೆಂಗಳೂರಿನಲ್ಲಿ ಯಾವುದೇ ಮನೆ ಮತ್ತು ನಿವೇಶನವಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಬಿಡಿಎಗೆ 2010ರ ಡಿಸೆಂಬರ್ 14 ರಿಂದ 2011ರ ನವೆಂಬರ್ 25ರ ಅವಧಿಯಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿ 56 ಜನರು ಜಿ ಕೆಟಗರಿ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ನ್ಯಾ.ಪದ್ಮರಾಜ್ ನೇತೃತ್ವದ ಸಮಿತಿ ನಿವೇಶನ ಹಂಚಿಕೆ ಕುರಿತು ವಿವರವಾದ ತನಿಖೆ ನಡೆಸುತ್ತಿದೆ.
ಜಿ ಕೆಟಗರಿ ನಿವೇಶನಗಳನ್ನು ಹಂಚುವಾಗ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ 1984ರ ನಿವೇಶನ ಹಂಚಿಕೆ ನಿಯಮ ಉಲ್ಲಂಘಿಸಿದೆ. ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಅನರ್ಹ ಫಲಾನುಭವಿಗಳಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ದೂರುಗಳ ಕುರಿತು ವಿಚಾರಣೆ ನಡೆಯುತ್ತಿದೆ.
ರಾಜ್ಯದ ಪ್ರಮುಖ ರಾಜಕಾರಣಿಗಳು ಬೆಂಗಳೂರಿನಲ್ಲಿ ಜಿ ಕೆಟಗರಿ ನಿವೇಶ ಪಡೆದಿದ್ದಾರೆ. ನ್ಯಾ.ಪದ್ಮರಾಜ್ ನೇತೃತ್ವದ ಸಮಿತಿಯ ವಿಚಾರಣೆಯ ನಂತರ ಅರ್ಹ ಫಲಾನುಭವಿಗಳು ಯಾರು? ಎಂಬ ಮಾಹಿತಿ ಹೊರಬೀಳಿದೆ. ಸಮಾಜ ಸೇವೆ ಮಾಡಿದ ಗಣ್ಯರಿಗೆ ನೀಡುವ ನಿವೇಶನವನ್ನು ವಾಹನ ಚಾಲಕ ಎ.ವಿಜೇಂದ್ರ ಎಂಬುವವರಿಗೆ ನೀಡಿರುವುದು ಸದ್ಯದ ತನಿಖೆಯಿಂದ ತಿಳಿದುಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ