ಸ್ಥಳೀಯ ಹೊಡೆತ: ಬಿಜೆಪಿ ಕೆಜೆಪಿ ವಿಲೀನಕ್ಕೆ ಚಾಲನೆ
ಖಚಿತ ಮೂಲಗಳ ಪ್ರಕಾರ ನಿನ್ನೆ ಮಧ್ಯಾಹ್ನದ ವೇಳೆಗೆ ಮತದಾರ ತಮ್ಮ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿರುವುದು ಸ್ಪಷ್ಟವಾಗುತ್ತಿದ್ದಂತೆ ಬಿಜೆಪಿ ನಾಯಕರು ಎದ್ದುಕುಳಿತಿದ್ದಾರೆ. ಮುನಿದ ಮುನಿ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ.
ತಾಜಾ ವರದಿಗಳ ಪ್ರಕಾರ ನಿನ್ನೆಯ ಫಲಿತಾಂಶಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರಾದ ಅನಂತ ಕುಮಾರ್, ಈಶ್ವರಪ್ಪ, ಸದಾನಂದ ಗೌಡ ಮತ್ತಿತರ ನಾಯಕರು ಸಭೆ ನಡೆಸುತ್ತಿದ್ದಾರೆ.
'ಕೈ'ಯಾರೆ ಸೋಲುತ್ತಿದ್ದಂತೆ ಕಂಗಾಲಾದ ರಾಜ್ಯ ನಾಯಕರೊಬ್ಬರು ನಿನ್ನೆ ಸಂಜೆಯೇ ದೂರವಾಣಿ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೊಸ ಪಕ್ಷ ಕಟ್ಟಿ, ಜಿದ್ದಿಗೆ ಬಿದ್ದಿರುವ ಯಡಿಯೂರಪ್ಪ ಹಲವು ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ.
ಯಡಿಯೂರಪ್ಪ ಇಲ್ಲದ ಬಿಜೆಪಿ, ಮುಂದಿನ ವಿಧಾನಸಭೆ ಮತ್ತು ಚುನಾವಣೆಯಲ್ಲಿ ಇದಕ್ಕಿಂತ ಹೀನಾಯ ಸೋಲುಣ್ಣಬೇಕಾಗುತ್ತದೆ ಎಂಬುದು ರಾಜ್ಯ ನಾಯಕರ ಅರಿವಿಗೆ ಬಂದಂತಿದೆ. ಹಾಗಾಗಿ ಈಗ ಸಮಝೋತಾ ನಡೆಸಿ, ಪಕ್ಷವನ್ನು ಮತ್ತೆ ಹಳಿಗೆ ತರುವ ಪ್ರಯತ್ನಗಳು ನಡೆದಿವೆ.
ರಾಜ್ಯ ನಾಯಕರೊಬ್ಬರು ತಮ್ಮನ್ನು ಸಂಪರ್ಕಿಸಿದ ಬಳಿಕ, ನೇರವಾಗಿ ರಾಜನಾಥ್ ಸಿಂಗ್ ಅವರೇ ನಿನ್ನೆ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಯಾವುದೇ ವಿಷಯದ ಕುರಿತು ಸ್ಪಷ್ಟ ಚರ್ಚೆಗಳು ನಡೆದಿಲ್ಲ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿ ಪಾಳಯಕ್ಕೆ ತಂದುಕೊಳ್ಳುವ ಬಗ್ಗೆ ರಾಜನಾಥ್ ಸಿಂಗ್ ಮೊನ್ನೆಯಷ್ಟೇ ಹೇಳಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಬಿಎಸ್ವೈ ಬಗ್ಗೆ ರಾಜನಾಥರಿಗೆ ಸಾಫ್ಟ್ ಕಾರ್ನರ್ ಇದ್ದಿರುವದೇ ಎಂದು ರಾಜನಾಥರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಪಕ್ಷ ಈಗ ಶೋಚನೀಯ ಸ್ಥಿತಿ ತಲುಪಿರುವುದು ಯಡಿಯೂರಪ್ಪ ಅವರತ್ತ ಕೈಚಾಚುವಂತೆ ಮಾಡಿದೆ.
ಈ ಮಧ್ಯೆ, ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಫಲಿತಾಂಶವನ್ನು ವಿಶ್ಲೇಷಿಸುವ ನೆಪದಲ್ಲಿ 'ಯಡಿಯೂರಪ್ಪ ಇಲ್ಲದ ಬಿಜೆಪಿಗೆ ದಯನೀಯ ಪರಿಸ್ಥಿತಿ ಒದಗಿದೆ' ಎಂದು ವ್ಯಾಖ್ಯಾನಿಸುವ ಮೂಲಕ ಪಕ್ಷಕ್ಕೆ ತಾವು ಎಷ್ಟು ಮುಖ್ಯ ಎಂಬುದನ್ನು ಮನದಟ್ಟುಪಡಿಸಲು ಯತ್ನಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ