ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡ ಜನತೆಗೆ ದ್ರೋಹ
ಕೇಂದ್ರೀಯ ನಾಗರೆಕ ಸೇವಾ ಆಯೋಗ(UPSC)ದ ಪರೀಕ್ಷಾ ವಿಧಾನ ಸರಿಯಿಲ್ಲ. ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲಾಗಿದೆ ಎಂದು ಎಲ್ಲಾ ರಾಜ್ಯಗಳಿಗೆ ನೋಟಿಫಿಕೇಷನ್ ಕಳಿಸಿದೆ. ಆದರೆ, ಈ ಬಗ್ಗೆ ಚರ್ಚೆ ಅಗತ್ಯವಿದೆ ಎಂದು ಮಂಗಳವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಮುಖ್ಯಮಂತ್ರಿ ಚಂದ್ರು ಪರೀಕ್ಷಾ ನಿಯಾಮವಳಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳ ಕನಿಷ್ಟ 25 ಮಂದಿ ಅಭ್ಯರ್ಥಿಗಳಿದ್ದರೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಿರುವುದು ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದೆ. ಇದರಿಂದ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನು ಹೊರತು ಪಡಿಸಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಸಾಯಿಸುವ ಪ್ರಯತ್ನವಾಗಿದ್ದು, ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುತ್ತೇನೆ" ಎಂದು ಚಂದ್ರು ಅಭಿಪ್ರಾಯಪಟ್ಟರು.
ಎಲ್ಲೆಡೆ ವಿರೋಧ: ನೂತನ ನಿಯಮಕ್ಕೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೂ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ಮತ್ತು ಎಂಎನ್ಎಸ್ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದೊಂದು ಜನವಿರೋಧಿ ಧೋರಣೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಕಿಡಿಕಾರಿದ್ದಾರೆ. ಅಂತೆಯೇ ತಮಿಳುನಾಡಿನಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ಪಕ್ಷಗಳು ಒಗ್ಗಟ್ಟಾಗಿ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ನಿಯಮದ ಪ್ರಕಾರ ಪದವಿಯಲ್ಲಿ ಪ್ರಾದೇಶಿಕ ಭಾಷೆಯನ್ನು ಐಚ್ಛಿಕವಾಗಿ ಪಡೆದಿರುವ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಬರೆಯಬಹುದು. ಆದರೆ ಪರೀಕ್ಷೆಗೆ ಕನಿಷ್ಟ 25 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರಬೇಕು. ಅಭ್ಯರ್ಥಿಗಳ ಸಂಖ್ಯೆ 24 ಇದ್ದರೂ ಸಹ ಪರೀಕ್ಷೆಗೆ ಅವಕಾಶವಿಲ್ಲ. ಹೀಗಾಗಿ ನೂತನ ಪರೀಕ್ಷಾ ನಿಯಮ ಹಲವು ರಾಜ್ಯಗಳ ವಿರೋಧಕ್ಕೆ ಕಾರಣವಾಗಿದೆ.
ಅಂಕ ಲೆಕ್ಕಾಚಾರದಲ್ಲೂ ಗೊಂದಲ: ಇದುವರೆವಿಗೂ ಒಂದು ಪ್ರಾದೇಶಿಕ ಭಾಷೆ ಹಾಗೂ ಇನ್ನೊಂದು ಇಂಗ್ಲೀಷ್ ಪೇಪರ್ ಬರೆಯಬೇಕಿತ್ತು. ಆದರೆ, ಇದರಲ್ಲಿ ಅಂಕಗಳನ್ನು ಅಂತಿಮ ಶ್ರೇಯಾಂಕ (ranking) ನೀಡುವಾಗ ಪರಿಗಣಿಸುತ್ತಿರಲಿಲ್ಲ. ಈಗ ಪ್ರಾದೇಶಿಕ ಭಾಷೆ ಪಠ್ಯಕ್ಕೆ ಕೊಕ್ ನೀಡಲಾಗಿದ್ದು, ಇಂಗ್ಲೀಷ್ ಭಾಷೆ(100 ಅಂಕಗಳು) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಅಂತಿಮ ಶ್ರೇಯಾಂಕಕ್ಕೆ ಪರಿಗಣಿಸಲಾಗುತ್ತದೆ.
ಐಚ್ಛಿಕ ವಿಷಯಗಳನ್ನು 2 ರಿಂದ 1 ಪಠ್ಯ ವಿಷಯಕ್ಕೆ ಇಳಿಸಲಾಗಿದೆ. ಸಾಮಾನ್ಯ ಪಠ್ಯ ವಿಷಯಗಳನ್ನು ನಾಲ್ಕಕ್ಕೇರಿಸಲಾಗಿದೆ. ಪ್ರತಿ ಪೇಪರ್ 250 ಅಂಕಗಳನ್ನು ಹೊಂದಿರುತ್ತದೆ. ಒಂದು ಐಚ್ಛಿಕ ವಿಷಯ ಎರಡು ಪೇಪರ್ ಹೊಂದಿದ್ದು ಒಟ್ಟು 500 ಅಂಕಗಳಿರುತ್ತದೆ. ಇಂಗ್ಲೀಷ್ 100 ಅಂಕಗಳ ಪರೀಕ್ಷೆಯಾಗಿದ್ದು, ಪ್ರಬಂಧ ರಚನೆ 200 ಅಂಕಗಳ ಪರೀಕ್ಷೆಯಾಗಿದೆ.
ಇದರಿಂದ ಪದವಿಯಲ್ಲಿ ಸಾಹಿತ್ಯ ಸಂಬಂಧಿಸಿದ ಪಠ್ಯವನ್ನು ಓದಿದವರು ಮತ್ತೆ ಐಚ್ಛಿಕವಾಗಿ ಕನ್ನಡ ಸಾಹಿತ್ಯ ಓದಲು ಸಾಧ್ಯವಾಗುವುದಿಲ್ಲ. ಸುಲಭವಾಗಿ ಒಂದು ಪೇಪರ್ ಕ್ಲಿಯರ್ ಮಾಡುವ ಅವಕಾಶ ಹೊಂದಿದ್ದ ಅಭ್ಯರ್ಥಿಗಳ ಆಸೆಗೆ ಸರ್ಕಾರ ತಣ್ಣೀರೆರಚಿದೆ.
ಪರ್ಸನಾಲಿಟಿ ಟೆಸ್ಟ್(ಇಂಟರ್ ವ್ಯೂ)ಅಂಕಗಳನ್ನು 300ರಿಂದ 275ಕ್ಕೆ ತಗ್ಗಿಸಲಾಗಿದೆ. ಹೀಗೆ ಎಲ್ಲ ರೀತಿಯಿಂದಲೂ ಹಿಂದಿ ಭಾಷಿಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ