ಸ್ವಾರ್ಥಿ ಎಲ್ ಕೆ ಆಡ್ವಾಣಿ ಬಿಜೆಪಿಯ ದುರಂತ ನಾಯಕ
ಬೆಂಗಳೂರು, ಮಾ 13: ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿಯವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೂ ತಲೆನೋವಾಗಿ ಪರಿಣಮಿಸಿದ್ದರು. ಆಡ್ವಾಣಿ ಬಿಜೆಪಿಯ 'ದುರಂತ ನಾಯಕ' ಎಂದು ಕೆಜೆಪಿ ಮುಖಂಡ ವಿ ಧನಂಜಯ್ ಕುಮಾರ್ ಲೇವಡಿ ಮಾಡಿದ್ದಾರೆ.
ಆಡ್ವಾಣಿಗೆ ತನ್ನ ಮಾನಸ ಪುತ್ರ ಅನಂತ್ ಕುಮಾರ್ ಮೇಲೆ ಕುರುಡು ಪ್ರೇಮ. ಇವರ ಈ ಕುರುಡು ಪ್ರೇಮ ರಾಜ್ಯದಲ್ಲಿ ಬಿಜೆಪಿಯನ್ನು ಮಣ್ಣುಮುಕ್ಕಿಸಲಿದೆ. ಆಡ್ವಾಣಿಯವರು, ಯಡಿಯೂರಪ್ಪ ಅವರನ್ನು ನೆನೆಸಿಕೊಳ್ಳುವ ಕಾಲ ದೂರವಿಲ್ಲ.
ಯಡಿಯೂರಪ್ಪ ಬಿಜೆಪಿಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತಂದರು. ಅನಂತ್ ಕುಮಾರ್ ದೆಹಲಿಯಲ್ಲಿ ಆಡ್ವಾಣಿಗೆ ಬೇಡವಾದದನ್ನೆಲ್ಲಾ ಹೇಳಿ ಯಡಿಯೂರಪ್ಪ ಪಕ್ಷ ತೊರೆಯುವಂತೆ ಮಾಡಿದರು ಎಂದು ಧನಂಜಯ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಖಾಸಾಗಿ ವಾಹಿನಿಯಲ್ಲಿ ಮಾತನಾಡುತ್ತಿದ್ದ ಧನಂಜಯ್ ಕುಮಾರ್, ಅನಂತ್ ಕುಮಾರ್ ಯಾರನ್ನೂ ನಂಬದ ವ್ಯಕ್ತಿ. ಅಂಥವರ ಮಾತಿಗೆ ಆಡ್ವಾಣಿ ಬೆಲೆ ಕೊಡುತ್ತಿರುವುದು ನೋವಿನ ಸಂಗತಿ. ಆಡ್ವಾಣಿ ಏನೂ ತನ್ನನ್ನು ತಾನು ಮಿ.ಕ್ಲೀನ್ ಅಂದುಕೊಳ್ಳುವುದು ಬೇಡ ಎಂದು ಧನಂಜಯ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಡ್ವಾಣಿ ಒಬ್ಬ ಸ್ವಾರ್ಥ ರಾಜಕಾರಿಣಿ. ಅವರು ಪ್ರಧಾನಿಯಾಗುವುದು ಕನಸಿನ ಮಾತು. ವಾಜಪೇಯಿ ಪ್ರಧಾನಿಯಾಗಿದ್ದಾಗ ಇವರ ಕಾಟ ತಾಳಲಾರದೆ ಅವರನ್ನು ಉಪಪ್ರಧಾನಿಯನ್ನಾಗಿ ಮಾಡಲಾಯಿತು ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ನಾಯಕರ ವಿರುದ್ದ ಧನಂಜಯ್ ಕುಮಾರ್ ಮುಂದುವರಿದ ಮಾತಿನ ಪ್ರಹಾರ ಸ್ಲೈಡಿನಲ್ಲಿ ಓದಿ...
ಅನಂತ್ ಕುಮಾರ್ ಮತ್ತು ಹುಡ್ಕೋ
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್ ಹುಡ್ಕೋ ಹಗರಣದಲ್ಲಿ ಕೋಟಿಗಟ್ಟಲೆ ದುಡ್ಡು ಕೊಳ್ಳೆ ಹೊಡೆದಿದ್ದಾರೆ. ಅವರೇನೂ ಸಾಚಾ ಅಲ್ಲ. ಬೆಂಗಳೂರಿನ ಪಂಚತಾರಾ ಹೋಟೆಲ್ ಅಶೋಕ ಡೀಲ್ ನಲ್ಲಿ 'ಒಳ್ಳೆ ಡೀಲ್' ಮಾಡಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ನಮ್ಮ ಪಕ್ಷದ ನಿಯತ್ತಿನ ಸದಸ್ಯೆ. ಅವರು ಅಧಿಕಾರದಲ್ಲಿದ್ದಾಗ ಇಂಧನ ಇಲಾಖೆಯಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ. ಇವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ.
ಎಲ್ ಕೆ ಆಡ್ವಾಣಿ
ಆಡ್ವಾಣಿವವರ ಮಗಳು ಮತ್ತು ಅಳಿಯ ಅಸಮಾನ್ಯರು. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಮೂಗು ತೂರಿಸುವ ಕೆಲಸವನ್ನು ಮಾಡುತ್ತಾರೆ. ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆಯೋ ಅಲ್ಲಲ್ಲಿ ಬಹಳಷ್ಟು ಆಸ್ತಿಯನ್ನು ಹೊಂದಿದ್ದಾರೆ.
ಸದಾನಂದ ಗೌಡ
ಸದಾನಂದ ಗೌಡರಿಗೆ ಈಗ ಅನಂತ್ ಕುಮಾರ್ ಅವರ ಷಡ್ಯಂತ್ರದ ಬಗ್ಗೆ ಅರಿವಾಗುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ ಸತ್ಯವನ್ನು ಅವರು ಮರೆತರು. ಅವರು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್ ಒಬ್ಬ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ. ಬಹಳ ಸಾಧು ಸ್ವಭಾವದವರಾದ ಅವರ ಬಗ್ಗೆ ಹೆಚ್ಚಿಗೆ ಹೇಳಲು ಬಯಸುವುದಿಲ್ಲ.
ಮುಂದಿನ ವಿಧಾನಸಭಾ ಚುನಾವಣೆ
ನಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಲಿದ್ದೇವೆ. ಯಡಿಯೂರಪ್ಪನವರಿಗೆ ಇರುವ ಜನಪ್ರಿಯತೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಜನತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ.