ಫೇಸ್ ಬುಕ್ ನಲ್ಲಿ ಗೆಳತಿಯ ಕಾಡಿದ ಟೆಕ್ಕಿ ಸೆರೆ
ಗುಂಟೂರು ಜಿಲ್ಲೆಯ ಮೊಟ್ಟುಮಾರಿ ವೆಂಕಟನಾಗ ಶಿವಪ್ರಸಾದ್ ಬಂಧಿತ ಆರೋಪಿ. ಸದರಿ ಸಾಫ್ಟ್ ವೇರ್ ಇಂಜಿನಿಯರ್ ಲಂಡನ್ನಿನಿಂದ ಬೆಂಗಳೂರಿಗೆ ಬರುವ ಮಾಹಿತಿ ಪಡೆದ ಆಂಧ್ರ ಸಿಐಡಿ ಪೊಲೀಸರು ಮಾರ್ಚ್ 6 ರಂದು ಬಂಧಿಸಿದ್ದಾರೆ. ಯುವತಿಯು ತನ್ನ ಬಾಲ್ಯದ ಗೆಳತಿ ಎಂದು ಆತ ಹೇಳಿಕೊಂಡಿದ್ದಾನೆ. ಈತನ ಮೊಬೈಲ್ ಹಾಗೂ ಲ್ಯಾಪ್ ಟಾಪ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈತ ಫೇಸ್ ಬುಕ್ ನಲ್ಲಿ ತನ್ನ ಗೆಳತಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಅದರಲ್ಲಿ ಸ್ನೇಹಿತೆಯ ಮುಖವನ್ನು ಅಶ್ಲೀಲ ಚಿತ್ರಗಳ ಜತೆಗೆ ಮಿಕ್ಸಿಂಗ್ ಮಾಡಿ ಪ್ರಕಟಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.
ಆರಂಭದಲ್ಲಿ ಗೆಳತಿಯ ಹಿಂದೆ ಬಿದ್ದಿದ್ದ ಟೆಕ್ಕಿ ವೆಂಕಟನಾಗ ಶಿವಪ್ರಸಾದ್, ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದು ಊರ್ಜಿತವಾಗದ ಕಾರಣ ಸೇಡು ತೀರಿಸಿಕೊಳ್ಳಲು ಮುಂದಾದ. ನಕಲಿ ಫೋಟೂಗಳನ್ನು ಸೃಷ್ಟಿಸಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದೂ ಅಲ್ಲದೆ ಅವುಗಳನ್ನು ಗೆಳತಿಯ ಭಾವಿ ಪತಿಗೂ ಈ ಮೇಲ್ ಮೂಲಕ ಕಳುಹಿಸಿದ್ದ. ಹಾಗಾಗಿ ನಿಶ್ಚಯವಾಗಿದ್ದ ಆಕೆಯ ಮದುವೆ ಮುರಿದುಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ಟೆಕ್ಕಿ ವೆಂಕಟನಾಗ ಶಿವಪ್ರಸಾದನ ವಿರುದ್ಧ ಆಕೆ ದೂರನ್ನು ನೀಡಿದ್ದರು. ತತ್ಫಲವಾಗಿ, ಲಂಡನ್ನಿನಿಂದ ಆಗಮಿಸುತ್ತಿದ್ದಂತೆ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಟೆಕ್ ಪದವೀಧರ ಪ್ರಸಾದ್, ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸದಲ್ಲಿದ್ದಾನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ