ಸಚಿವ ಲಕ್ಷ್ಮಣ ಸವದಿ ಸಂಬಂಧಿ ಮೇಲೆ ಹಲ್ಲೆ
ವಿಧಾನ ಸೌಧದಲ್ಲಿ ಡರ್ಟಿ ಪಿಕ್ಚರ್ ನೋಡಿದ ಕುಖ್ಯಾತಿಗೆ ಒಳಗಾಗಿದ್ದ ಸಚಿವ ಲಕ್ಷ್ಮಣ ಸವದಿ ಅವರ ಸೋದರ ಕಾಶಪ್ಪ ಸವದಿ ಅವರ ಮಗ ಶಿವಕುಮಾರ್ ಸವದಿ ಅವರು ನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಘಟನೆ ವಿವರ: ನಗರದ ಪ್ರತಿಷ್ಠಿತ ಬಡಾವಣೆಯಾದ ಸದಾಶಿವ ನಗರದಲ್ಲಿ ಕಳೆದ ರಾತ್ರಿ ಸುಮಾರು 9.30ರ ಹೊತ್ತಿಗೆ ಶಿವಕುಮಾರ್ ಸವದಿ ಅವರು ತಮ್ಮ ಹ್ಯುಂಡೈ ಐ10 ಕಾರಿನಲ್ಲಿ ಚಲಿಸುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆಗೊಳಲಾಗಿದ್ದಾರೆ. ಮಾರಾಕಾಸ್ತ್ರಗಳನ್ನು ತಂದಿದ್ದ ದುಷ್ಕರ್ಮಿಗಳು ಶಿವಕುಮಾರ್ ಅವರಿಗೆ ಪರಿಚಿತರೇ ಇರಬಹುದು ಎಂದು ಅನುಮಾನಿಸಲಾಗಿದೆ.
ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ವಾರದಲ್ಲಿ ಎರಡನೇ ಸಲ ಎಂದು ತಿಳಿದು ಬಂದಿದೆ. ಶಿವಕುಮಾರ್ ಅವರು ಕಳೆದ ರಾತ್ರಿ ಸದಾಶಿವ ನಗರದಿಂದ ಜೆಸಿ ನಗರದಲ್ಲಿರುವ ತಮ್ಮ ಭಾವಿ ಪತ್ನಿಯ ಮನೆಯ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಯಲು ಏನು ಕಾರಣ? ಎಂದು ಹುಡುಕಿದಾಗ ಶಿವಕುಮಾರ್ ಅವರ ಪ್ಲೇ ಬಾಯ್ ಇಮೇಜ್ ಹೊರಬಿದ್ದಿದೆ. ಹಾಲಿ ಭಾವಿ ಪತ್ನಿಗಿಂತ ಮುಂಚಿತವಾಗಿ ಒಂದಿಬ್ಬರು ಯುವತಿಯರಿಗೆ ಪ್ರೇಮಿಸಿ ಕೈ ಕೊಟ್ಟ ಪ್ರಕರಣ ಬಯಲಿಗೆ ಬಂದು ಬಿದ್ದಿದೆ.
ಇನ್ನೊಂದು ವರದಿ ಪ್ರಕಾರ ಶಿವಕುಮಾರ್ ಸವದಿ ಅವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅವರ ಭಾವಿಪತ್ನಿ ಕೂಡಾ ಇದ್ದರು. ಆದರೆ, ಸವದಿಯನ್ನು ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಮೇಲೆ ಯಾರೊಬ್ಬರು ಹಲೆ ನಡೆಸಲಿಲ್ಲ ಎನ್ನಲಾಗಿದೆ. ಕಳೆದ ಎರಡು ಮೂರು ವಾರಗಳ ಹಿಂದಷ್ಟೇ ಸವದಿ ಅವರಿಗೆ ಮದುವೆ ನಿಶ್ಚಿತಾರ್ಥವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಜೆಸಿ ನಗರ ಪೊಲೀಸರು, ದುಷ್ಕರ್ಮಿಗಳು ಶೀಘ್ರದಲ್ಲೇ ಬಂಧಿಸಲಾಗುವುದು, ಶಿವಕುಮಾರ್ ಸವದಿ ಅವರು ಚೇತರಿಸಿಕೊಳ್ಳುತ್ತಿದ್ದು, ಅವರ ಹೇಳಿಕೆ ಪಡೆದ ನಂತರ ತನಿಖೆ ತೀವ್ರಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ