ಆಸೆ ತೋರಿಸಿ ಮೋಸ ಮಾಡಿದ ಚಿಂಚನಸೂರ್ : ಆರೋಪ
ಯಾದಗಿರಿ ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರದಲ್ಲಿ ಎಂಎಲ್ಸಿ ಮಾಡುತ್ತೇನೆಂದು ಆಸೆ ತೋರಿಸಿ ಬಾಬುರಾವ್ ಚಿಂಚನಸೂರ್ ಅವರು ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಬಾಬುರಾವ್ ಅವರು 2.5 ಕೋಟಿ ರು. ಕೇಳಿದ್ದರು. 1.5 ಕೋಟಿ ರು. ಕೊಡುವುದಾಗಿ ಕೊನೆಗೆ ಒಪ್ಪಂದವಾಗಿತ್ತು. ಅದರಲ್ಲಿ 85 ಲಕ್ಷ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ. ಆದರೆ, ತಮ್ಮನ್ನು ಎಲ್ಸಿಯನ್ನಾಗಿಯೂ ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ ಎಂದು ಅವರು ದೂರಿದರು. ಹಣ ಹಿಂದಿರುಗಿಸದಿದ್ದರೆ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ ಹಣ ನೀಡುವ ಸಂದರ್ಭದಲ್ಲಿ ಡಾ.ಅಜೇಯ್ ಜಾಧವ್ ಹಾಗೂ ಅಣ್ಣಾರಾವ್ ಮುತ್ತುಟ್ಟಿ ಜೊತೆ ಇದ್ದರು. ಹಣ ಪಡೆದಿರುವ ಚಿಂಚನಸೂರ್ ವಾಪಸ್ಸು ನೀಡುವುದಾಗಿ ಕಳೆದ ಎರಡು ವರ್ಷದಿಂದ ಸುಳ್ಳು ಹೇಳುತ್ತಾ ತಮ್ಮನ್ನು ಸಂಕಷ್ಟದಲ್ಲಿ ದೂಡಿದ್ದಾರೆ ಎಂದು 40 ವರ್ಷಗಳಿಂದ ನಲಗುಂಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಅವರು ಆಕ್ರೋಶ ವ್ಯಕ್ತಪಡಿಸಿದರು.
ಚಿಂಚನಸೂರ್ ಹಣ ವಾಪಸ್ಸು ನೀಡದಿದ್ದರೆ ಇದೇ ಮಾ.12ರಂದು ಗುರುಮಠಕಲ್ ನ ತಹಸೀಲ್ದಾರ್ ಕಚೇರಿ ಮುಂದೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಇಲ್ಲಿ ನ್ಯಾಯ ಸಿಗದಿದ್ದರೆ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಿವಾಸದ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಒಂದು ಮನವಿ ಪತ್ರವನ್ನು ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಕೊಡುವುದಾಗಿ ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ವಿಜಯಪಾಲ ರೆಡ್ಡಿ ಅವರು, ಗುರುಮಠಕಲ್ ಕ್ಷೇತ್ರದ 25 ಸಾವಿರ ಜನರು ನನ್ನ ಜೊತೆಗಿದ್ದಾರೆ, ಅವರಿಗೆಲ್ಲ ಬಾಬು ಚಿಂಚನಸೂರ್ ಅವರು ಎಂಥವರೆಂದು ಚೆನ್ನಾಗಿ ಗೊತ್ತಿದೆ. ಬಾಬುರಾವ್ ಅವರಿಗೆ ಶಿಕ್ಷೆಯಾಗಲೇಬೇಕು. ನನ್ನ ಹೋರಾಟವನ್ನು ಗಾಂಧಿಗಿರಿಯ ಮುಖಾಂತರವೇ ಧರಣಿ ಕೂಡುವ ಮೂಲಕ ಮುಂದುವರಿಸುವುದಾಗಿ ಅವರು ತಿಳಿಸಿದರು.
ಇತ್ತೀಚೆಗೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತರ ಬಲೆಗೆ ಬಿದ್ದು ಆರೋಪ ಮುಕ್ತನಾಗಿದ್ದ ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಂದ್ದು ಕಂಟಕ ಎದುರಾಗಿದೆ. ಬಾಬುರಾವ್ ಚಿಂಚನಸೂರ್ ಅವರು ಮೊಬೈಲ್ ಕರೆಗೆ ಸಿಗುತ್ತಿಲ್ಲ. ಕರೆ ಮಾಡಿದರೆ ನಾಟ್ ರೀಚೆಬಲ್ ಸಂದೇಶ ಬರುತ್ತಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ