3 ಲಕ್ಷ ಖರ್ಚು 3 ಕಾಸಿನ ಪ್ರಯೋಜನವಿಲ್ಲ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರಿಡುವುದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ, ಬಿಬಿಎಂಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ವಿಷಯಗಳ ಬಗ್ಗೆ ಮನವಿ ಸ್ವೀಕರಿಸಿದ ಕೇಂದ್ರ ಸರ್ಕಾರ ಯಾವುದಕ್ಕೂ ತಕ್ಷಣದ ಸಮ್ಮತಿ ಸೂಚಿಸಿದೆ ಬಿಬಿಎಂಪಿ ನಿಯೋಗವನ್ನು ಬರಿಗೈಯಲ್ಲಿ ಕಳಿಸಿದೆ.
ಆದರೆ, ಪೂರ್ಣ ಒಪ್ಪಿಗೆ ಸಿಕ್ಕಿದೆ ಎಂದು ಮೇಯರ್ ಹಾಗೂ ಅವರ ಸದಸ್ಯರು ದೆಹಲಿ ಪ್ರಯಾಣ ಯಶಸ್ವಿ ಎಂದು ಹೇಳಿಕೊಂಡಿದ್ದಾರೆ. ಸಂಸದ ಅನಂತ್ ಕುಮಾರ್ ಅವರನ್ನು ಮುಂದಿಟ್ಟುಕೊಂಡು ಬಿಬಿಎಂಪಿ ನಿಯೋಗ ಮೊದಲಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರ ಕಚೇರಿಗೆ ತೆರಳಿತ್ತು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಮನವಿ ಸಲ್ಲಿಸಲಾಯಿತು. ಜೊತೆಗೆ ಬಿಐಎಎಲ್ ಬಳಿ 18 ಅಡಿ ಎತ್ತರದ ಅಶ್ಚರೂಢ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೂ ಮನವಿ ನೀಡಲಾಯಿತು. ಆದರೆ, ಎಲ್ಲವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ತಕ್ಷಣಕ್ಕೆ ಕೋರಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ.
ಇದೇ ರೀತಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹೆಸರಿಡಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ಇದಕ್ಕೆ ನಿಮ್ಮ (ರೈಲ್ವೆ ಇಲಾಖೆ) ಒಪ್ಪಿಗೆ ಬೇಕು ಎಂದು ಕೇಂದ್ರ ರೈಲ್ವೆ ಸಚಿವ ಪಿಕೆ ಬನ್ಸಾಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಅಲ್ಲೂ ಕೂಡಾ ಅಜಿತ್ ಸಿಂಗ್ ನೀಡಿದ ಉತ್ತರ ಸಿಕ್ಕಿತು.
ನಂತರ ರಕ್ಷಣಾ ಸಚಿವ ಎ.ಕೆ ಅಂಟನಿ ಬಳಿಗೆ ತೆರಳಿ ಬೆಂಗಳೂರಿನಲ್ಲಿರುವ ಸೇನಾ ವ್ಯಾಪ್ತಿಗೆ ಬರುವ 45 ಎಕರೆ ಭೂಮಿಯನ್ನು ಬಿಬಿಎಂಪಿ ಹಿಡಿತಕ್ಕೆ ನೀಡಬೇಕು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಮನವಿ ಸಲ್ಲಿಸಲಾಯಿತು. ಬೇರೆ ಕಡೆ ಭೂಮಿಯನ್ನು ಗುರುತಿಸಿ ಸೇನೆಗೆ ನೀಡಿ ನಂತರ ನೀವು ಕೇಳಿದ ಭೂಮಿಯನ್ನು ಬಿಟ್ಟುಕೊಡುತ್ತೇವೆ ಎಂದು ಅಂಟನಿ ಹೇಳಿ ಕಳಿಸಿದ್ದಾರೆ.
1991ರ ಜನಗಣತಿ ಪ್ರಕಾರ ಬೆಂಗಳೂರು ನಗರಕ್ಕೆ 8 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಾಗುತ್ತಿತ್ತು. ಈಗ ಬೆಂಗಳೂರಿನ ಜನಸಂಖ್ಯೆ ತೀವ್ರವಾಗ್ಇ ಏರಿಕೆಯಾಗಿದ್ದು ಕುಡಿಯುವ ನೀರಿನ ದಾಹ ತಗ್ಗಿಸಲು 30 ಟಿಎಂಸಿ ನಿಗದಿಪಡಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವ ಹರೀಶ್ ರಾವತ್ ಅವರಿಗೆ ಬಿಬಿಎಂಪಿ ನಿಯೋಗ ಮನವಿ ಮಾಡಿತು.
ಕುಡಿಯುವ ನೀರಿನ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಬೇಡಿಕೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಬೇಡಿಕೆ ಪೂರೈಸಲಾಗುವುದು ಎಂದು ರಾವತ್ ಭರವಸೆ ನೀಡಿದರು.
ಕರ್ನಾಟಕ ಮೂಲದ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಲು ಬಿಬಿಎಂಪಿ ನಿಯೋಗ ಉದ್ದೇಶಿಸಿತ್ತು ಆದರೆ, ಕಾರಣಾಂತರದಿಂದ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ