ಮಗಳ ಮದ್ವೆ: ಶೆಟ್ಟರೇ ಮದನಿಗೆ ಜಾಮೀನು ಬೇಕಂತೆ
ಇತ್ತೀಚೆಗಷ್ಟೇ ಹೈದರಾಬಾದ್ ಸ್ಫೋಟದ ಸಂಬಂಧವೂ ನಾಸೀರ್ ಮದನಿಯನ್ನು ಹೈದರಾಬಾದ್ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ವಿಚಾರಣೆ ನಡೆಸಿ ಹೋಗಿದ್ದಾರೆ. ಮದನಿ ವಿರುದ್ಧ ಕೇಸು ಸ್ಟ್ರಾಂಗಾಗಿಯೇ ಇದೆ. ಹಾಗಿರುವಾಗ ಜಾಮೀನು/ಪೆರೋಲ್ ನೀಡಬೇಕೇ? ಏನೇ ಇರಲಿ ಅದು ಕೋರ್ಟ್ ಮತ್ತು ಪರಪ್ಪನ ಜೈಲು ಅಧೀಕಾರಿಗಳ ವಿವೇಚನೆಗೆ ಬಿಟ್ಟ ವಿಷಯ.
ಆದರೆ ಈ ಮದನಿ ಇದಾನಲ್ಲಾ? ಅವನು ಮಗಳ ಮದುವೆ ಹೆಸರಿನಲ್ಲಿ ಜಾಮೀನು ಬೇಕೆಂದು ಯಾರಿಗೆಲ್ಲ ಗೋಗರೆದಿದ್ದಾನೆ ನೋಡಿ. ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ಅವರ ಮೇಲೆ ಪ್ರಭಾವ ಬೀರಿರುವ ಮದನಿ, ಹೇಗಾದರೂ ಮಾಡಿ ಜಾಮೀನು ಕೊಡಿಸಿ ಎಂದು ಅಲವತ್ತುಕೊಂಡಿದ್ದಾನೆ. ಅನಾರೋಗ್ಯದ ನೆಪವೊಡ್ಡಿ ಈ ಹಿಂದೆಯೂ ಮದನಿಯನ್ನು ಕೇರಳಕ್ಕೆ ಕರೆದೊಯ್ಯಲು ಅಲ್ಲಿನ ಸರಕಾರ ಯತ್ನಿಸಿತ್ತು.
ಮದನಿ ಮನವಿಗೆ ಕರಗಿದ ಸಿಎಂ ಚಾಂಡಿ ಸೀದಾ ನಮ್ಮ ಸಿಎಂ ಶೆಟ್ಟರ್ ಗೆ ಪತ್ರ ಬರೆದು, ಮದನಿಗೆ ಜಾಮೀನು ಸಿಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿದ ಆರೋಪದ ಮೇಲೆ 2010ರ ಆಗಸ್ಟ್ 17ರಂದು ಕೇರಳದ ಕೊಲ್ಲಂನಲ್ಲಿ ಹೈ ಡ್ರಾಮಾ ಮಧ್ಯೆ ಬೆಂಗಳೂರು ಪೊಲೀಸರು ಮದನಿ ಕೈಗೆ ಕೋಳ ತೊಡಿಸಿ, ಬೆಂಗಳೂರಿಗೆ ಕರೆತಂದಿದ್ದರು.
ಮದನಿಯ ಮಗಳೇ ಮುಖ್ಯಮಂತ್ರಿ ಕಚೇರಿಗೆ ಬಂದು 'ನನ್ನ ನಿಖಾ ಇದೆ. ಅಪ್ಪ ಮದನಿ ಮದುವೆ ಮನೆಯಲ್ಲಿ ಓಡಾಡಿಕೊಂಡು ಇರಬೇಕು ಎಂಬುದೇ ನನ್ನ ಆಸೆ. ಇದಕ್ಕೆ ತಾವು ಅನುವು ಮಾಡಿಕೊಡಬೇಕು' ಎಂದು ಕೋರಿದ್ದಾಳೆ. ಇದಕ್ಕೆ ಕರಗಿರುವ ಸಿಎಂ ಚಾಂಡಿ, ಕೇರಳದಲ್ಲಿ ರಾಜಕೀಯವಾಗಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಬಲಿಷ್ಠನಾಗಿರುವ ಮದನಿಗೆ ಜಾಮೀನು ಕೊಡಿಸಲು ಯತ್ನಿಸಿದ್ದಾರೆ.
ಆದರೆ ಜಾಮೀನು ಏನು ಶೆಟ್ಟರ ಅಂಗಡಿಯಲ್ಲಿ ಸಿಗುವ ಕಡ್ಲೆಪುರಿಯೇ? ಕೋರ್ಟ್ ಇರುವುದು ಏತಕ್ಕೆ? ಅದೂ ಭಯೋತ್ಪಾದನೆಯಂತಹ ಗಂಭೀರ ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಗೆ ಮುಖ್ಯಮಂತ್ರಿಗಳು ಬಯಸಿದಂತೆ ಜಾಮೀನು ಕೊಡಿಸುವುದಕ್ಕೆ ಆಗುತ್ತದಾ?
ಅಷ್ಟಕ್ಕೂ ಮದನಿಯನ್ನು ಅವನ ಇದೇ ಊರಿನಿಂದ ಬಂಧಿಸಿ ಕರೆತರಲು ಬೆಂಗಳೂರು ಪೊಲೀಸರು ಹೈರಾಣಗೊಂಡಿದ್ದರು. ಅಂತಹುದರಲ್ಲಿ ಮತ್ತೆ ಈಗ ಅದೇ ಊರಿನಲ್ಲಿ ನಡೆಯುವ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಮದನಿಗೆ ಅವಕಾಶ ಕಲ್ಪಿಸಿದರೆ ಶಾಂತಿ, ಕಾನೂನು ಸುವ್ಯವಸ್ಥೆ ಎದುರಾಗುವುದಿಲ್ಲವೇ? ಜತೆಗೆ, ಮದನಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆತಂಕವೂ ಇದೆ. ಹಾಗಾಗಿ ಅವನಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಪ್ರಕರಣದ ಹಿರಿಯ ತನಿಖಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದೇ ಮಾರ್ಚ್ 10ರಂದು ಕೊಲ್ಲಂನಲ್ಲಿ ಮದನಿ ಊರಿನಲ್ಲಿ ಅವನ ಮಗಳು ಶಬೀರಾ ಮತ್ತು ನಿಸಾಬುದ್ದೀನ್ ಮದುವೆ ನಿಗದಿಯಾಗಿದೆ. ಅಂದಹಾಗೆ, 2008ರ ಜುಲೈ 8ರಂದು ಮದನಿ ತಂಡ ಸ್ಫೋಟಿಸಿದ ಬಾಂಬಿಗೆ ಒಬ್ಬರು ಬಲಿಯಾಗಿ, 20 ಮಂದಿ ಗಾಯಗೊಂಡಿದ್ದರು.