ಶ್ರೀರಂಗಪಟ್ಟಣ: ದೇಗುಲ ಕಳಶ ಕುಸಿತ, ಆತಂಕ ಬೇಡ
ಕಳೆದ ಎರಡು ದಿನಗಳ ಹಿಂದೆ ಒಂದು ಕಳಶ ಬಿದ್ದಿತ್ತು. ನಂತರ ಮತ್ತೊಂದು ಪಂಚಲೋಹದ ಕಳಶ ಬಿದ್ದಿರುವುದು ಜನತೆಯಲ್ಲಿ ಭಯ ಹುಟ್ಟಿಸಿತ್ತು. ರಾಜಗೋಪುರದಲ್ಲಿ ಒಟ್ಟು 5 ಪಂಚಲೋಹದ ಕಳಶಗಳನ್ನು ಇದುವರೆವಿಗೂ ಕಾಣಬಹುದಾಗಿತ್ತು.
ಗಂಗರ ಕಾಲದ ಅರಸ ತಿರಮಲರಾಯನ ಕಾಲದಲ್ಲಿ ಕ್ರಿ.ಶ. 896ರಲ್ಲಿ ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇವಾಲಯ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ.
ನಂತರ ಹೊಯ್ಸಳರು, ವಿಜಯನಗರದ ಕೊನೆಗಾಲದಲ್ಲಿ ತಿಮ್ಮಣ ನಾಯಕರ ಅಧೀನಕ್ಕೆ ದೇಗುಲ ಬರುತ್ತದೆ. ದೇಗುಲದ ರಾಜಗೋಪುರದ ನಿರ್ಮಾಣ ವಿಜಯನಗರದ ಆರಸರಿಂದ ಆಗಿದೆ ಎಂದು ನಂಬಲಾಗಿದೆ.
ಸುಮಾರು 800 ವರ್ಷ ಇತಿಹಾಸವುಳ್ಳ ದೇಗುಲವನ್ನು ನಂತರ ಮೈಸೂರು ಅರಸರು ಅಭಿವೃದ್ಧಿಪಡಿಸಿದರು. ದೇವಾಲಯಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅಂದಿನ ದೊರೆ ಟಿಪ್ಪು ಸುಲ್ತಾನ್ ದೇವಾಲಯವನ್ನು ಸಂರಕ್ಷಿಸಿ ದುರಸ್ತಿ ಮಾಡಿದ್ದ ಎಂಬುದಕ್ಕೆ ದಾಖಲೆಗಳಿದೆ.
ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಒಮ್ಮೆ ರಾಜಗೋಪುರಕ್ಕೆ ದುರಸ್ತಿ ಮಾಡಲಾಗಿತ್ತು. ನಂತರ ಈ ವರೆಗೂ ಯಾವುದೇ ರಿಪೇರಿ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಶಿಥಿಲಗೊಂಡಿದ್ದ ಕಳಶ ಕಳಚಿಬಿದ್ದಿದೆ ಎನ್ನಲಾಗಿದೆ.
ನಾಡಿನಲ್ಲಿ ಮುಂಬರುವ ಬರ, ಕ್ಷಾಮದ ಮುನ್ಸೂಚನೆ ಇದಾಗಿದ್ದು, ಕಾವೇರಿ ತಪ್ಪಲಿನ ನಾಡಿಗೆ ಕಷ್ಟದ ದಿನಗಳು ಎದುರಾಗಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ದೇಗುಲದ ಕಳಶಗಳನ್ನು ನಾಲ್ಕೈದು ತಿಂಗಳಿನಲ್ಲಿ ಮೊದಲ ಸ್ಥಿತಿಗೆ ತರುತ್ತೇವೆ ಎಂದು ಭಾರತೀಯ ಸರ್ವೇಕ್ಷಣ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉಳಿದ ಕಳಶಗಳ ರಿಪೇರಿ ಕೂಡಾ ಕೈಗೆತ್ತಿಕೊಳ್ಳಲಾಗುವುದು ಎಂದು ದೇಗುಲದ ಕಾರ್ಯಕಾರಿ ಅಧಿಕಾರಿ ಧನಲಕ್ಷ್ಮಿ ಹೇಳಿದ್ದಾರೆ.
ಹೋಮ, ಹವನ, ಶಾಂತಿ, ದೋಷ ಪರಿಹಾರ ಪೂಜೆ ಪುನಸ್ಕಾರ ಮಾಡುವ ಮೂಲಕ ದೇವರನ್ನು ಸಂತುಷ್ಟಗೊಳಿಸಬೇಕಿದೆ. ಭಕ್ತಾದಿಗಳು ನಿರಾಂತಕವಾಗಿ ದೇಗುಲಕ್ಕೆ ಬರಬಹುದಾಗಿದೆ ಎಂದು ಅರ್ಚಕ ವಿಜಯ ಸಾರಥಿ ಕೋರಿದ್ದಾರೆ. ನೀವು ಇನ್ನೂ ಶ್ರೀರಂಗಪಟ್ಟಣ ನೋಡಿಲ್ಲವೆಂದರೆ ಇಲ್ಲಿದೆ ಮಾರ್ಗ ಸೂಚಿ