ರಜೆ ಸಜೆ: ಸಬ್ ಇನ್ಸ್ ಪೆಕ್ಟರಿಗೆ ಬಿತ್ತು ಚಪ್ಪಲಿ ಏಟು
ರಾಜಾನುಕುಂಟೆ ಯುವ ಸಬ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ಪೇದೆ ಆನಂದನಿಗೆ ರಜೆ ನೀಡದೆ ಅವನಿಂದಲೇ ಹತನಾದ ಘಟನೆ ನಡೆದ ನಂತರವೂ ಈ ಅಧಿಕಾರಿಗಳು ಎಚ್ಚೆತ್ತಿಲ್ಲ. ಮತ್ತೆ ತಮ್ಮ ಕೈಕೆಳಗಿನ ಪೇದೆಗಳನ್ನು ಗೋಳು ಹೊಯ್ದುಕೊಳ್ಳುವುದನ್ನು ಮುಂದುವರಿಸಿದ್ದಾರೆ.
ಚಿಕ್ಕಮಗಳೂರಿನ ರಾಮನಹಳ್ಳಿ ಬಡಾವಣೆಯಲ್ಲಿನ ಡಿಎಆರ್ ಕಚೇರಿಯಲ್ಲಿ ಮತ್ತದೇ ರಜೆ ಗೋಳು ಕಾಣಿಸಿಕೊಂಡಿದೆ. ಪೇದೆಯೊಬ್ಬರು ತನ್ನ ಮೇಲಧಿಕಾರಿ ಎಸ್ಸೈ ರಜೆ ನೀಡಲಿಲ್ಲವೆಂದು ರಪ್ಪಾ ರಪ್ಪಾ ಅಂತ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಆರ್ ಎಸ್ಐ ವಾಸುದೇವ್ ಹಲ್ಲೆಗೊಳಗಾದ ಅಧಿಕಾರಿ. ಮೀಸಲು ಪಡೆಯ ಕಾನ್ಸ್ಟೇಬಲ್ ಆನಂದ್ ಎಂಬವರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ವಾಸುದೇವ್ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೇದೆ ಆನಂದ್ ಎರಡು ದಿನಗಳ ಹಿಂದೆ ರಜೆ ಕೇಳಿ ಎಸ್ ಐ ವಾಸುದೇವ್ಗೆ ಮನವಿ ಸಲ್ಲಿಸಿದ್ದರು. ಆದರೆ, ವಾಸುದೇವ್ ರಜೆ ನೀಡಲು ಸತಾಯಿಸಿದರು ಎನ್ನಲಾಗಿದೆ. ಇದರಿಂದ ಕುಪಿತರಾದ ಆನಂದ್ ನಿನ್ನೆ ರಾತ್ರಿ ಕುಡಿದು ಕಚೇರಿಗೆ ಬಂದು, ಸದರಿ ಎಸ್ ಐ ಜೊತೆ ವಾಗ್ವಾದ ನಡೆಸಿದ್ದಾರೆ.
ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಕ್ರೋಧಗೊಂಡ ಪೇದೆ ಚಪ್ಪಲಿಯಿಂದ ವಾಸುದೇವ್ ಮುಖಕ್ಕೆ ಬಲವಾಗಿ ಹೊಡೆದಿದ್ದಾರೆ. ಚಪ್ಪಲಿ ಹೊಡೆತದಿಂದ ವಾಸುದೇವ್ ಮೂಗು ಛಿದ್ರಗೊಂಡು ರಕ್ತ ಸುರಿದಿದೆ. ತಕ್ಷಣ ವಾಸುದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಆನಂದನನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೇದೆಗಳನ್ನು ಹೀಗೆ ಗೋಳುಹೊಯ್ದುಕೊಳ್ಳುವುದು ಮಾಮೂಲು ಎಂದು ನಿವೃತ್ತರಾದ ಮೇಲೆ ಹಿರಿಯ ಅಧಿಕಾರಿಗಳೇ ಟಿವಿ ಚಾನೆಲುಗಳಲ್ಲಿ ಕುಳಿತು ಹೇಳುತ್ತಿರುತ್ತಾರೆ.
ಈ ಅವಿವೇಕಿ ಪೊಲೀಸ್ ಅಧಿಕಾರಿಗಳಿಗೆ ಯಾವಾಗ ಬುದ್ಧಿಬರುತ್ತದೋ...?