BIAL ಸಮೀಪ ಬೃಹತ್ ಟೂಲ್ ರೂಂ ಸ್ಥಾಪನೆ: ಮುನಿಯಪ್ಪ
ಬೆಂಗಳೂರು, ಮಾ.4: ಕೇಂದ್ರ ಕೈಗಾರಿಕಾ ಸಚಿವ ಕೆಎಚ್ ಮುನಿಯಪ್ಪ ಅವರು ತಮಗಾಗಿ ಕೋಲಾರ ಮತ್ತು ಮಗಳಿಗಾಗಿ ಕೆಜಿಎಫ್ ಕ್ಷೇತ್ರಗಳಿಗಷ್ಟೇ ದುಡಿಯುವುದನ್ನು ಬಿಟ್ಟು ಸ್ವಲ್ಪ ಹೊರ ಪ್ರದೇಶಕ್ಕೂ ಬಂದಿದ್ದಾರೆ. ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವರಾಗಿ ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಯಂತ್ರೋಪಕರಣ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ.
ಯಂತ್ರೋಪಕರಣ ತರಬೇತಿ ಪಡೆದವರಿಗೆ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ, ಇಲ್ಲಿ ತರಬೇತಿ ಹೊಂದಿದವರನ್ನು BIAL ಮೂಲಕ ನೇರವಾಗಿ ವಿದೇಶಕ್ಕೆ ಕಳಿಸುವುದು ಸಚಿವ ಮುನಿಯಪ್ಪ ಅವರ ಇರಾದೆಯಾಗಿದೆ.
ಬಹುಶಃ ಇದು ಈಗಾಗಲೇ ರಾಜಾಜಿನಗರ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಇರುವ Government Tool Room and Training Centre ಮಾದರಿ ಇರಬಹುದು.
ದೇಶದಲ್ಲಿ ಒಟ್ಟು 2,500 ಕೋಟಿ ರೂ. ವೆಚ್ಚದಲ್ಲಿ ಒಟ್ಟು 15 ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರ ಸರಕಾರಕ್ಕಿದೆ. ರಾಜ್ಯ ಸರಕಾರ ಈಗಾಗಲೇ 15 ಎಕರೆ ಜಾಗ ನೀಡಿರುವುದರಿಂದ ಮೊದಲ ಕೇಂದ್ರ ಕರ್ನಾಟಕದಲ್ಲೇ ಆರಂಭಿಸಲಾಗುವುದು. 200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರ ತೆರೆಯುವುದಾಗಿ ಅವರು ಹೇಳಿದ್ದಾರೆ.
ಎಲ್ಲ ಮಾದರಿಯ ಯಂತ್ರೋಪಕರಣಗಳ ನಿರ್ವಹಣೆಗೆ ಇಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಅವಧಿ 3 ತಿಂಗಳಿಂದ 6 ವರ್ಷ ದವರೆಗೂ ಇರುತ್ತದೆ. ಶೀಘ್ರದಲ್ಲೇ ಕೆಂದ್ರ ಕಾರ್ಯಾರಂಭ ಮಾಡಲಿದೆ.
ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ ತರಬೇತಿ ಮೂಲಕ ಯುವಜನರನ್ನು ಜಾಗತಿಕ ಮಾರುಕಟ್ಟೆ ಸವಾಲುಗಳಿಗೆ ಅಣಿಗೊಳಿಸಲು ಈ ಸುಸಜ್ಜಿತ 'ಟೂಲ್ ರೂಮ್ ಟ್ರೈನಿಂಗ್ ಸೆಂಟರ್' ತೆರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಒಟ್ಟು 10 ತರಬೇತಿ ಕೋರ್ಸ್ ಗಳನ್ನು ಇಲ್ಲಿ ಆರಂಭಿಸಲಾಗುವುದು. ಇಲ್ಲಿ ಶಿಕ್ದಣ ಪಡೆದವರಿಗೆ ಸಂಪೂರ್ಣ ಉದ್ಯೋಗ ಖಾತ್ರಿ ಇರುತ್ತದೆ.
ಟೂಲ್ ಡಿಸೈನ್, ಟೂಲ್ ಇಂಜಿನಿಯರಿಂಗ್, ಟೂಲ್ ಡೆವಲಪ್ ಮೆಂಟ್, ಸಾಲಿಡ್ ಮಾಡೆಲಿಂಗ್ ಸೇರಿದಂತೆ ಏರೋಸ್ಪೇಸಿಗೆ ಸಂಬಂಧಪಟ್ಟಂತೆ ಹೊಸ ವಿಷಯಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.
ಎಸ್ಎಸ್ಎಲ್ ಸಿ ಪಾಸಾದವರು/ಫೇಲಾದವರಿಗೂ ಇಲ್ಲಿ ಪ್ರತ್ಯೇಕ ತರಬೇತಿ ನೀಡಲಾಗುವುದು. ಬಿಟೆಕ್/ ಎಂಟೆಕ್ ಕೋರ್ಸುಗಳನ್ನೂ ಆರಂಭಿಸುವ ಉದ್ದೇಶವೂ ಇದೆ. ಆರಂಭದಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಆರಂಭಿಸಿ, 3 ವರ್ಷ ಆಗುವುದರೊಳಗೆ ಪ್ರತಿ ವರ್ಷ 10,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಇದೆ ಸಚಿವ ಮುನಿಯಪ್ಪ ವಿವರಿಸಿದ್ದಾರೆ.