ಭಾರತಕ್ಕೆ ಕಾದಿದೆ ಆರ್ಥಿಕ ಆಪತ್ತು:ಅಮೆರಿಕ ಥಿಂಕ್ ಟ್ಯಾಂಕ್
'ಭಾರತದ ಅರ್ಥ ವ್ಯವಸ್ಥೆಯಲ್ಲಿ ಉತ್ಪಾದನಾ ವಲಯದ ಕೊಡುಗೆ ಬಹಳ ಪ್ರಮುಖವಾಗುತ್ತದೆ. ದೇಶದಲ್ಲಿ ಯುವಜನತೆಗೆ ಉದ್ಯೋಗ ಕಲ್ಪಿಸುವುದು ಇದೇ ಕ್ಷೇತ್ರ. ಆದರೆ ಿದು ಅವಗಣನೆಗೆ ಗುರಿಯಾಗಿದೆ. ಈ ಕ್ಷೇತ್ರದ ಪ್ರಗತಿಯೇ ಮಾಯವಾಗಿದೆ' ಎಂದು ಡೆರಿಕ್ ಆತಂಕ ವ್ಯಕ್ತಪಡಿಸಿದ್ದಾರೆ.
'ಪಿ ಚಿದಂಬರಂ ಅವರು ಕಳೆದ ವಾರ ಮಂಡಿಸಿದ ಬಜೆಟ್ ಬಗ್ಗೆ ವಿಶ್ಲೇಷಣೆ ನಡೆಸಿದ ಡೆರಿಕ್, ಬಜೆಟ್ ನಂತರದ ಭಾರತದ ಆರ್ಥಿಕತೆ ಶೋಚನೀಯವಾಗಲಿದೆ. ''ಅರ್ಥವತ್ತ'' ಆರ್ಥಿಕತೆಯೇ ಕಾಣುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಯುವಜನತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ' ಎಂದು ಅವರು ತಿಳಿಯ ಹೇಳಿದ್ದಾರೆ.
ಆರ್ಥಿಕ ತಜ್ಞ ಡೆರಿಕ್ ಹೇಳುವಂತೆ ಅಮೆರಿಕದ ಹಾದಿಯಲ್ಲಿ ಸಾಗುತ್ತಿರುವ ಭಾರತ ಸಹ ತಪ್ಪು ಹೆಜ್ಜೆಗಳನ್ನು ಹಾಕುತ್ತಿದೆ. ಭಾರತೀಯರಲ್ಲಿ ಇತ್ತೀಚೆಗೆ ಖರ್ಚು ಬಾಬ್ತು ಹೆಚ್ಚಾಗುತ್ತಿದೆ. ಇನ್ನೂ ಶೇ. 17ರಷ್ಟು ಏರಿಕೆಯಾಗಲಿದೆ. 'ಅರ್ಥ'ರಹಿತ ಖರ್ಚುಗಳಿಗೆ ಕಡಿವಾಣ ಹಾಕಲೇ ಬೇಕು. ಇಲ್ಲವಾದಲ್ಲಿ ಆರ್ಥಿಕ ಕೊರತೆ ಪೆಡಂಭೂತದಂತೆ ಕಾಡಲಿದೆ ಎಂಬುದು ಡೆರಿಕ್ ಖಡಕ್ ಮಾತು.
ಈ ಹಿಂದೆ 2004 ರಿಂದ 2007ರವರೆಗೆ ಕಂಡುಬಂದ ಉತ್ತಮ ಬೆಳವಣಿಗೆಯು ಅದರ ಹಿಂದಿನ ವರ್ಷಗಳಲ್ಲಿ ಕಂಡುಬಂದಿದ್ದ ಸುಧಾರಣೆಗಳ ಫಲವಾಗಿತ್ತು. ಸುಸ್ಥಿರ ಸುಧಾರಣೆಗಳು ಇಲ್ಲದೆ ತ್ವರಿತ ಪ್ರಗತಿ ಕೈಗೂಡದು. ಸರಕಾರದ ಆದಾಯ ಮತ್ತು ಆರ್ಥಿಕ ಕೊರತೆ ಸರಕಾರವನ್ನು ಬಹಳವಾಗಿ ಕಾಡಲಿದೆ. ಗ್ರಾಹಕರೂ ಇದರ 'ಫಲ' ಸವಿಯಬೇಕಾಗುತ್ತದೆ. ಇದು ಖಂಡಿತ' ಎಂಬುದು ಡೆರಿಕ್ ಅವರ ಖಂಡತುಂಡ ಮಾತು.