ಅಕಟಕಟಾ, ನಾನು ಸರ್ವಾಧಿಕಾರಿಯೇ?: ಶೋಭಾ
ತದನಂತರ ಅಂದರೆ ಶೋಭಾ ಮೇಡಂ ಕೆಜೆಪಿಗೆ ಎಂಟ್ರಿ ಪಡೆಯುತ್ತಿದ್ದಂತೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಹೋಗಿ ಯಡವಟ್ಟು ಮಾಡಿಕೊಂಡರು ಎಂಬುದು ಸುಳ್ಳೇನಲ್ಲ. ಅದರಲ್ಲೂ ಕಾಪು ಸಿದ್ದಲಿಂಗಸ್ವಾಮಿ ರೆಬೆಲ್ ಆಗುವ ಸೂಚನೆಗಳೂ ಹೊರಬಿದ್ದವೂ. ಇದೆಲ್ಲರ ಫಲವಾಗಿ ಶೋಭಾ ಕರಂದ್ಲಾಜೆ ಅವರು ಮೂರು ತಿಂಗಳ ಕೂಸು ಕೆಜೆಪಿ ಮೇಲೆ ಕಪಿಮುಷ್ಠಿ ಸಾಧಿಸಿದ್ದಾರೆ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂಬ ಮಾತುಗಳು ತೇಲಿಬಂದವು.
ಡ್ಯಾಮೇಜ್ ಕಂಟ್ರೋಲ್: ಇದಕ್ಕೆ ಮಂಗಳ ಹಾಡಲೋ ಅಥವಾ ಡ್ಯಾಮೇಜ್ ಕಂಟ್ರೋಲ್ ಮಾಡಲೋ ಎಂಬಂತೆ ಶೋಭಾ ಮೇಡಂ ತಮಗೆ ಹೊಸದಾಗಿ ದೊರೆತ ಸರ್ವಾಧಿಕಾರಿ ಪಟ್ಟದ ಬಗ್ಗೆ ತುಟಿಬಿಚ್ಚಿದ್ದು, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. 'ಹೌದು ನಾನು ಸರ್ವಾಧಿಕಾರಿ ಎಂಬುದೆಲ್ಲಾ ಮಾಧ್ಯಮಗಳ ಸೃಷ್ಟಿ' ಎಂದು ಮೇಡಂ ಶೋಭಾ ಘೋಷಿಸಿದ್ದಾರೆ.
'ಪಕ್ಷದ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಪ್ರಸನ್ನ ಕುಮಾರ್ ಪ್ರಕರಣದ ಕುರಿತು ಚುನಾವಣಾ ಆಯೋಗ ಅದಾಗಲೇ ಆದೇಶ ನೀಡಿದೆ. ಹೈಕೋರ್ಟಿನಲ್ಲೂ ನಮ್ಮ ಪರವಾಗಿ ಗೆಲುವಾಗುತ್ತದೆ. ಬೇರೆ ಪಕ್ಷದ ನಾಯಕರ ಪಿತೂರಿಯಿಂದಾಗಿ ಪ್ರಸನ್ನ ಕುಮಾರ್ ಯಡಿಯೂರಪ್ಪ ವಿರುದ್ಧವಾಗಿ ನಡೆದುಕೊಂಡರು. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ' ಎಂದು ಶುಕ್ರವಾರ ಸ್ಪಷ್ಟನೆ ನಿಡಿದ್ದಾರೆ.
ಬಿಜೆಪಿಗೆ ಗ್ರಹಣ ಬಡಿಯಿತು: 'ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ತೊರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಗ್ರಹಣ ಹಿಡಿದಿದೆ. ಯಡಿಯೂರಪ್ಪನವರು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಬಡವರ ಪಾಲಿಗೆ ಸರ್ಕಾರ ಮಾರಕವಾಗಿ ಪರಿಣಮಿಸಿದೆ' ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ
ಬಿಜೆಪಿ ಒಡೆದ ಮನೆಯಾಗಿದ್ದರೆ, ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ. ಜೆಡಿಎಸ್ ರಾಜ್ಯದ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರ ಸಾರಥ್ಯದ ಕೆಜೆಪಿಗೆ ಬೆಂಬಲಿಸಿ ಅವರ ಕೈ ಬಲಪಡಿಸಬೇಕು ಎಂದೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿಕೊಂಡಿದ್ದಾರೆ.