ಹೊಸಕೋಟೆ-ಪೆರಂಬದೂರು ಪ್ರಯಾಣ ಎರಡೇ ಗಂಟೆ!
ಇದೆಲ್ಲಾ ಬರೀ ಬಜೆಟ್ ಪುಸ್ತಕದಲ್ಲಷ್ಟೇ ಉಳಿಯುತ್ತದಾ ಅಥವಾ ದೇಶದಲ್ಲಿ ನಿಜಕ್ಕೂ ಎಲ್ಲಾದರೂ ಈಗಾಗಲೇ ಇಂತಹ ಕಾರ್ಯಯೋಜನೆಗಳು ನಡೆದಿವೆಯಾ? ಅಂದರೆ ದೆಹಲಿ- ಮುಂಬೈ ಕೈಗಾರಿಕಾ ಕಾರಿಡಾರ್ ಧುತ್ತನೆ ಎದುರಾಗುತ್ತದೆ. ಆ ಕಾರಿಡಾರ್ ಯೋಜನೆಯ ನಿರ್ಮಾಣ ಕಾರ್ಯ ಕ್ಷಿಪ್ರವಾಗಿ ಸಾಗಿದೆ. ಈ ಯೋಜನೆಯಡಿ ಹೊಸದಾಗಿ ಸೇರ್ಪಡೆಯಾಗುವ ಏಳು ನಗರಗಳನ್ನು ನಿನ್ನೆ ಬಜೆಟಿನಲ್ಲಿ ಅಂತಿಮಗೊಳಿಸಲಾಗಿದೆ.
ನಿನ್ನೆ ಹಣಕಾಸು ಸಚಿವ ಪಿ ಚಿದಂಬರಂ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಾಣಿಜ್ಯ ಕಾರಿಡಾರ್ ಯೋಜನೆಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ, ಆಂಧ್ರ ಪ್ರದೇಶ-ಚೆನ್ನೈ-ಬೆಂಗಳೂರು-ಮುಂಬೈ ವಾಣಿಜ್ಯ ಕಾರಿಡಾರ್ ಯೋಜನೆ ನನಸಾಗುವ ಹಂತದಲ್ಲಿದೆ. ಪೆನಿನ್ಸುಲರ್ ರೀಜನ್ ಇಂಡಸ್ಟ್ರಿಯಲ್ ಡೆವಲಪ್ಮಂಟ್ ಕಾರಿಡಾರ್ (PRIDe corridor) ಎಂಬುದಾಗಿಯೂ ಈ ಯೋಜನೆಯನ್ನು ಕರೆಯಲಾಗುತ್ತದೆ.
ಚೆನ್ನೈ-ಬೆಂಗಳೂರು ಕಾರಿಡಾರ್: ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್ ಬೆಂಗಳೂರು ಹೊರವಲಯದ ಹೊಸಕೋಟೆಯಿಂದ ಆರಂಭವಾಗಿ ಚೆನ್ನೈ ಹೊರವಲಯದ ಶ್ರೀಪೆರಂಬದೂರು ವರೆಗೆ ತಲುಪಲಿದೆ. ಈ ವ್ಯಾಪ್ತಿಯಲ್ಲಿ ಐದು ಕೈಗಾರಿಕಾ ಹಬ್ಗಳನ್ನು ಗುರುತಿಸಲಾಗಿದೆ.
260 ಕಿಮೀ ಎಕ್ಸ್ಪ್ರೆಸ್ ವೇನಲ್ಲಿ ವಾಹನಗಳು 150 ಕಿ.ಮೀ. ವೇಗದಲ್ಲಿ ಧಾವಿಸಬಹುದಾಗಿದೆ ಹಾಗೂ ಹೊಸಕೋಟೆಯಿಂದ ಶ್ರೀಪೆರಂಬುದೂರಿಗೆ ಎರಡು ಗಂಟೆಯಲ್ಲಿ ಹೋಗಬಹುದಾಗಿದೆ.
ಕರ್ನಾಟಕದ ಹೊಸಕೋಟೆ, ಬಂಗಾರ ಪೇಟೆ, ಆಂಧ್ರ ಪ್ರದೇಶದ ಪಲಮನೇರು, ಚಿತ್ತೂರು, ತಮಿಳುನಾಡಿನ ಶ್ರೀಪೆರಂಬದೂರನ್ನು ಕೈಗಾರಿಕಾ ಹಬ್ಗಳನ್ನು ಈ ಕಾರಿಡಾರ್ ಒಳಗೊಳ್ಳಲಿದೆ. ಇಲ್ಲಿ ಉಕ್ಕು, ಸಿಮೆಂಟ್, ಆಹಾರ ಸಂಸ್ಕರಣೆ, ಐಟಿ, ಬಿಟಿ, ಆಟೋ ಮೊಬೈಲ್, ರೆಡಿಮೆಡ್ ಗಾರ್ಮೆಂಟ್ಸ್ಗೆ ಪ್ರಾಶಸ್ತ್ಯ ನೀಡಲಾಗಿದೆ.