ಕೊನೆಗೂ ಯಡಿಯೂರಪ್ಪ ಪರ ಗುರಾಣಿ ಝಳಪಿಸಿದ ನಿರಾಣಿ
ಕೊಪ್ಪಳ, ಮಾ.01: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ತಮ್ಮ ರಾಜಕೀಯ ಗುರು, ಕೆಜೆಪಿ ಪಕ್ಷದ ಯಡಿಯೂರಪ್ಪ ಪರ ಗುರಾಣಿ ಝಳಪಿಸಿದ್ದಾರೆ.
'ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ನಮ್ಮ ನಿಜವಾದ ನಾಯಕರು. ಸದ್ಯಕ್ಕೆ ಬಿಜೆಪಿಯಲ್ಲಿದ್ದೇನೆ. ಅವರು ಹೇಳಿದ ದಿನವೇ ಪಕ್ಷ ಬಿಡಲು ನಿರ್ಧರಿಸುತ್ತೇನೆ' ಎಂದು ನಿರಾಣಿ ಗುರುವಾರ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಹಿಮ್ಮೇಳವಾಗಿ ಬಿಜೆಪಿ ಸಚಿವ ಗೋವಿಂದ ಕಾರಜೋಳ ವಿರುದ್ಧ ನಿರಾಣಿ ಕತ್ತಿ ಝಳಪಿಸುತ್ತಿರುವುದು ಇಂಟರೆಸ್ಟಿಂಗ್ ಆಗಿದೆ.
ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ತದನಂತರ ವಿಧಾನಸಭೆ ಚುನಾವಣೆಯನ್ನು ಎದುರಿಗೇ ಇಟ್ಟುಕೊಂಡು ನಿರಾಣಿ ಅವರು ಯಡಿಯೂರಪ್ಪಗೆ ಜೈ ಜೈ ಎಂದಿರುವುದು ಬಿಜೆಪಿಗೆ ಇರುಸುಮುರುಸು ತಂದಿದೆ.
ಈ ಮಧ್ಯೆ, ತಮ್ಮ ಅತ್ಯಾಪ್ತ ನಿರಾಣಿ ತಡವಾಗಿಯಾದರೂ ಕೆಜೆಪಿ ಸೇರುವ ಮಾತನ್ನಾಡಿರುವುದು ಯಡಿಯೂರಪ್ಪಗೆ ತುಸು ಸಮಾಧಾನ ತಂದಿದ್ದರೆ, ಮತ್ತೊಬ್ಬ ಸಚಿವ ಬಸವರಾಜ ಬೊಮ್ಮಾಯಿ ಅವರು ತಾವು ಬಿಜೆಪಿಗೇ ಅಂಟಿಕೊಳ್ಳುವುದಾಗಿ ಹೇಳಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.
ಕುತೂಹಲದ ಸಂಗತಿಯೆಂದರೆ ಯಡಿಯೂರಪ್ಪ ಸಂಬಂಧಿ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ) ಚಂದ್ರಕಾಂತ್ ಬೆಲ್ಲದ್ ಸದ್ಯಕ್ಕೆ ಮೌನವ್ರತಾಚರಣೆಯಲ್ಲಿದ್ದು, ಅತಿ ಶೀಘ್ರದಲ್ಲೇ ಕೆಜೆಪಿ ಸೇರುವುದು ಖಚಿತ ಎನ್ನಲಾಗಿದೆ.