ಹವಾಲಾ ಆರೋಪಿ ಮಧು ಕೋಡಾಗೆ ಜಾಮೀನು
42 ವರ್ಷ ವಯಸ್ಸಿನ ಮಧು ಕೋಡಾ ಅವರು ಜೈಲಿನಿಂದ ಹೊರ ಬರಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ. ಇನ್ನೂ ಎರಡು ಪ್ರಕರಣಗಳಲ್ಲಿ ಅವರಿಗೆ ಜಾಮೀನು ಸಿಗಬೇಕಿದೆ ಎಂದು ಅವರ ಪರ ವಕೀಲ ಹೇಳಿದ್ದಾರೆ.
2009ರಲ್ಲಿ ಸಿಂಗಬೂಮ್ ಕ್ಷೇತ್ರದ ಸಂಸದರಾಗಿರುವ ಮಧು ಕೋಡಾ ಅವರು ಸ್ವಗ್ರಾಮ ಚೈಬಾಸಾದಲ್ಲಿರುವ ನಿವಾಸಕ್ಕೆ ತೆರಳಿ ಎಸ್ಪಿ ಅಖಿಲೇಶ್ ಕುಮಾರ್ ಅವರ ನೇತೃತ್ವದ ತಂಡ ಬಂಧಿಸಿದ್ದರು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧು ಕೋಡಾ ಹಾಗೂ ಅವರ ಸಂಪುಟದಲ್ಲಿದ್ದ 6 ಮಾಜಿ ಸಚಿವರು ಮತ್ತು ಇಬ್ಬರು ಆಪ್ತರಾದ ಮನೋಜ್ ಪುನಾಮಿಯಾ ಮತ್ತು ಅರವಿಂದ್ ವ್ಯಾಸ್ ಅವರ ಮೇಲೆ ಸಿಬಿಐ ಪ್ರತ್ಯೇಕ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ಜಾರಿ ನಿರ್ದೇಶನಾಲಯ ಕೂಡಾ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.
ಜಾರಿ ನಿರ್ದೇಶನಾಲಯದ ಪ್ರಕಾರ ಸುಮಾರು 2500 ಕೋಟಿ ರು ಅವ್ಯವಹಾರ ಆರೋಪ ಹೊರೆಸಲಾಗಿತ್ತು. ನಂತರ 3400 ಕೋಟಿ ಅಕ್ರಮ ಬಯಲಿಗೆಳೆಯಲಾಗಿತ್ತು. ಸಿಬಿಐ ತಂಡ ದೇಶದಾದ್ಯಂತ ಸುಮಾರು 70 ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಧುಕೋಡಾ ಅವರ ಸ್ಥಿರ ಹಾಗೂ ಚರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿತ್ತು. ಸುಮಾರು 200 ಕೋಟಿ ವಶಪಡಿಸಿಕೊಂಡು ರಾಂಚಿ ನ್ಯಾಯಾಲಯದಲ್ಲಿ 2012ರಲ್ಲಿ ಮತ್ತೊಮ್ಮೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿ 23 ತಿಂಗಳು ಅಧಿಕಾರದಲ್ಲಿದ್ದ 39 ವರ್ಷದ ಮಧು ಕೋಡಾ, ಈ ಅವಧಿಯಲ್ಲಿ ಸುಮಾರು 5,500 ಕೋಟಿ ರುಪಾಯಿಗಳ ಅವ್ಯವಹಾರ ನಡೆಸಿದ್ದಾರೆ. ಮಧುಕೋಡಾ ಅವರು ಜಾರ್ಖಂಡ್ ನವನಿರ್ಮಾಣ ಮೋರ್ಚಾ ಎಂಬ ನೂತನ ಪಕ್ಷವನ್ನು ಹುಟ್ಟು ಹಾಕಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಧು ಕೋಡಾ ಅವರ ಆಪ್ತ ಅನಿಲ್ ಬಸ್ತವಾಡೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಭಾರತಕ್ಕೆ ಕರೆ ತಂದಿದ್ದರು. ಮಧು ಕೋಡಾ ಅವರು ಅಕ್ರಮವಾಗಿ ಸಂಗ್ರಹಿಸಿದ ಸಂಪತ್ತನ್ನು ವಿದೇಶಕ್ಕೆ ಸಾಗಿಸುವಲ್ಲಿ ಅನಿಲ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.