ಕಾವೇರಿ: ತಂಜಾವೂರು ರೈತರಿಂದ ಜಯಾಗೆ ಸನ್ಮಾನ
ಚೆನ್ನೈ, ಫೆ.28: ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಹಾಗೆ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ದಿಲ್ಲಿಯಲ್ಲಿ ಠಿಕಾಣಿ ಹೂಡಿ ಕಾವೇರಿ ನ್ಯಾಯ ಮಂಡಳಿ ರಚಿಸಬೇಡಿ ಎಂದು ಅಲವತ್ತುಕೊಂಡಿರುವ ಸಂದರ್ಭದಲ್ಲೇ ಅತ್ತ ತಮಿಳುನಾಡಿನ...
ತಂಜಾವೂರು ಭಾಗದ ಕಾವೇರಿ ರೈತರು ತಮ್ಮ ಪಾಲಿನ ಅಧಿದೇವತೆ, ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಗೌರವಪೂರ್ವಕವಾಗಿ ಸನ್ಮಾನ ಮಾಡಲು ಸಿದ್ಧತೆ ನಡೆಸಿದ್ದಾರೆ.
ನಿನ್ನೆ, ಈ ಸಂಬಂಧ ಸಚಿವಾಲಯದಲ್ಲಿ ಮುಖ್ಯಮಂತ್ರಿ ಜಯಲಲಿತಾರನ್ನು ಭೇಟಿ ಮಾಡಿದ ರೈತರ ನಿಯೋಗವು ಸನ್ಮಾನವನ್ನು ಒಪ್ಪಿಸಿಕೊಳ್ಳುವಂತೆ ಜಯಾರನ್ನು ಕೋರಿದ್ದಾರೆ. ಕಾವೇರಿ ಅಧಿಸೂಚನೆಯನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಳ್ಳಲು ನಿರ್ಧರಿಸಿರುವ ಜಯಾ ಸಹ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕರ್ನಾಟಕದಿಂದ 'ವಿಪರೀತ' ಒತ್ತಡವಿದ್ದಾಗ್ಯೂ ಅಧಿಸೂಚನೆ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿ ಅಮ್ಮಾ ಜಯಾ ಯಶಸ್ವಿಯಾಗಿದ್ದಾರೆ ಎಂದು ತಂಜಾವೂರು ರೈತರು ತಮ್ಮ ಮುಖ್ಯಮಂತ್ರಿಯನ್ನು ಇಂದೇ ಕೊಂಡಾಡಿದ್ದಾರೆ. ಇನ್ನು, ಮಾರ್ಚ್ 7ರಂದು ಇವರು ತಮ್ಮ ಮುಖ್ಯಮಂತ್ರಿಯನ್ನು ಏನೆಲ್ಲಾ ಹಾಡಿಹೊಗಳುತ್ತಾರೋ ಕಾದುನೋಡಬೇಕಿದೆ.