ಬಿಜೆಪಿ ಯುವ ಮೋರ್ಚಾ ನಾಯಕನ ಹತ್ಯೆ
ನಾಗಪುರದ ಭಾರತೀಯ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದ ಹೇಮಂತ್ ದಿಯೇವಾರ್ ಮೃತಪಟ್ಟ ದುರ್ದೈವಿ. ನಗರದ ಜನನಿಬಿಡ ಪ್ರದೇಶದಲ್ಲಿ ತುಂಬಾ ಹತ್ತಿರದಿಂದ ಮೂರು ಬಾರಿ ಶೂಟ್ ಮಾಡಿ ಕೊಲ್ಲಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಖಾಲಿಯಾಗಿ ಬಿದ್ದಿದ್ದ ಶೆಲ್ ಕೇಸಿಂಗ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆದರೆ, ಮರಣೋತ್ತರ ಪರೀಕ್ಷೆ ಪ್ರಕಾರ ಹೇಮಂತ್ ಮೃತದೇಹದಲ್ಲಿ ನಾಲ್ಕು ಕಡೆ ಬುಲೆಟ್ ನಿಂದ ಗಾಯಗಳಾದ ಗುರುತು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ನಾಗಪುರದ ಅಂಬಾಜಾರಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಹೇಳಿದ್ದಾರೆ.
ಇಬ್ಬರು ಮುಸುಕುಧಾರಿಗಳು ಹಂಚುಹಾಕಿಕೊಂಡು ಕಾದಿದ್ದು ಹೇಮಂತ್ ರನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. ರಾಜಕೀಯ ದ್ವೇಷದಿಂದ ಈ ಕೃತ್ಯ ನಡೆದಿದೆ ಎಂಬ ಶಂಕೆ ಇದೆ. ಪ್ರತಿ ಪಕ್ಷದ ನಾಯಕರೊಬ್ಬರ ಅಕ್ರಮಗಳ ಬಗ್ಗೆ ಹೇಮಂತ್ ಮಾಹಿತಿ ಸಂಗ್ರಹಿಸಿದ್ದರು. ಇಷ್ಟರಲ್ಲೇ ಮಾಹಿತಿ ಬಹಿರಂಗ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಗುಂಡಿನ ದಾಳಿ ನಡೆದಾಗ ಹೇಮಂತ್ ಜೊತೆ ಒಬ್ಬರು ಗೆಳಯರಿದ್ದರು. ಹತ್ತಿರದ ಸ್ನ್ಯಾಕ್ಸ್ ಬಾರ್ ಗೆ ಹೋಗಿ ತಿಂಡಿ ತರುವಷ್ಟರಲ್ಲಿ ಹತ್ಯೆ ನಡೆದಿದೆ. ಹೇಮಂತ್ ಅವರ ಗೆಳೆಯ ನೀಡಿದ ಮಾಹಿತಿ ಆಧಾರಿಸಿ ತನಿಖೆ ಮುಂದುವರೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಸಿನಿಮೀಯ ಮಾದರಿಯಲ್ಲಿ ನಡೆದ ಶೂಟೌಟ್ ನಡೆಸಿರುವುದು ವೃತ್ತಿಪರ ಶೂಟರ್ ಗಳಿಂದ ಮಾತ್ರ ಸಾಧ್ಯ ಕುಖ್ಯಾತ ಶೂಟರ್ ಗಳಾದ ಸುಮಿತ್ ಠಾಕೂರ್ ಹಾಗೂ ಶೈಖು ಖಾನ್ ಅವರ ಕೈವಾಡ ಇರಬಹುದು. ಹೇಮಂತ್ ಕೊಲೆಗೆ ಅಪಾರ ಪ್ರಮಾಣದ ಸುಪಾರಿ ಮೊತ್ತ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಿಯಲ್ ಎಸ್ಟೇಟ್ ಬಿಲ್ಡರ್ ಗಳ ಕಾಟ, ಕಲ್ಲಿದ್ದಲು ಗಣಿಗಾರಿಕೆ ಪರವಾನಗಿ ಕೊಲೆ ಕಾರಣ ಇರಬಹುದು ಅಥವಾ ಬಿಹಾರಿ ಗ್ಯಾಂಗ್ ನ ಕೃತ್ಯವೂ ಇರಬಹುದು ಎಂದು ಅನುಮಾನಿಸಲಾಗಿದೆ.
ಸೋಮವಾರ, ಮಂಗಳವಾರ ಎರಡು ದಿನ ಹೇಮಂತ್ ನೆಲೆಸಿದ್ದ ಸುಭಾಶ್ ನಗರದಲ್ಲಿ ಮೌನ ಆವರಿಸಿದೆ. ಸೋಮವಾರ ಅಘೋಷಿತ ಬಂದ್ ಆಚರಿಸಲಾಗಿತ್ತು. ಅಸಂಖ್ಯಾತ ಕಾಲೇಜು ವಿದ್ಯಾರ್ಥಿ ಸಮೂಹ ಹೇಮಂತ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು,