ಮಹಿಳಾ ಟೆಕ್ಕಿ ಬಸ್ ಚಕ್ರಕ್ಕೆ ಸಿಲುಕಿ ಸಾವು
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎಚ್ ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷ ವಯಸ್ಸಿನ ಜಲಜಶ್ರೀ ಮೃತಪಟ್ಟ ದುರ್ದೈವಿ. ದೇವನಹಳ್ಳಿ ಕೋಟೆ ನಿವಾಸಿ ರಾಮ್ ಮೋಹನ್ ಅವರ ಏಕೈಕ ಪುತ್ರಿಯಾಗಿದ್ದ ಜಲಜ ಪ್ರತಿ ದಿನ ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ಬಂದು ಮಾಡುತ್ತಿದ್ದರು.
ಪ್ರತಿನಿತ್ಯ ದೇವನಹಳ್ಳಿಯಿಂದ ಕೆಆರ್ ಮಾರುಕಟ್ಟೆ ಕಡೆ ಹೋಗುವ ಖಾಸಗಿ ಬಸ್ ಹತ್ತಿ ಕಾರ್ಪೋರೇಷನ್ ತನಕ ಬಂದಿಳಿಯುತ್ತಿದ್ದರು. ನಂತರ ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಬಸ್ ಹತ್ತುತ್ತಿದ್ದರು.
ಮಂಗಳವಾರ (ಫೆ.26) ಎಂದಿನಂತೆ ದೇವನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. 9.45ರ ಸುಮಾರಿಗೆ ಬಂದ ಗೋಪಾಲಕೃಷ್ಣ ಹೆಸರಿನ ಖಾಸಗಿ ಬಸ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತಕ್ಷಣ ಅಪ್ಪ ರಾಮಮೋಹನ್ ಅವರಿಗೆ ಮೊಬೈಲಿನಿಂದ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಹೋಂಡಾ ಆಕ್ಟಿವಾದಲ್ಲಿ ಬಂದ ರಾಮಮೋಹನ್ ಮಗಳನ್ನು ಕರೆದು ಕೊಂಡು ಬಳ್ಳಾರಿ ರಸ್ತೆಯಲ್ಲಿರುವ ಚಿಕ್ಕಸಣ್ಣೆ ಗೇಟ್ ಬಳಿ ಬಸ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಸ್ಕೂಟರ್ ನಿಂದ ಇಳಿದ ಜಲಜಶ್ರೀ ಮುಂಭಾಗದ ಬಾಗಿಲಿನಲ್ಲಿ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಕೆ ಬಿದ್ದಿದ್ದನ್ನು ಗಮನಿಸದ ಚಾಲಕ ಬಸ್ ಚಲಿಸಿದ್ದಾನೆ. ಜಲಜಶ್ರೀ ಮೇಲೆ ಎರಡು ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಡಿಸಿಪಿ ಮಹದೇವಯ್ಯ ಹೇಳಿದ್ದಾರೆ.