ಅತ್ಯಾಚಾರ ವಿರುದ್ಧ ಗೂಂಡಾ ಕಾಯ್ದೆ: ಭಾರಿ ಹಿನ್ನಡೆ
ಈಗಿರುವ ಗೂಂಡಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅದು ಉಚಿತವೂ ಅಲ್ಲ. ಆದ್ದರಿಂದ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಹೊಸದಾಗಿ ಕಾಯ್ದೆ ರಚಿಸುವ ಬಗ್ಗೆ ಯೋಚಿಸಿ, ತಿಳಿಸಿ ಎಂದು ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅತ್ಯಾಚಾರ ಆರೋಪಿಗಳನ್ನು ಗೂಂಡಾಕಾಯ್ದೆ ಅಡಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಶರಣ್ ದೇಸಾಯಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ಮತ್ತು ನ್ಯಾ ಎಸ್ ಅಬ್ದುಲ್ ನಜೀರ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
'ಗೂಂಡಾ ಎನ್ನುವ ಪದದ ಅರ್ಥವ್ಯಾಪ್ತಿ ಮತ್ತು ಅತ್ಯಾಚಾರಿ ಎಂಬ ಪದದ ಅರ್ಥವ್ಯಾಪ್ತಿ ಬೇರೆ ಬೇರೆಯಾಗಿದೆ. ಇವೆರಡೂ ಒಂದೇ ಅಲ್ಲ. ಹೆಣ್ಣುಮಕ್ಕಳನ್ನು ಚುಡಾಯಿಸುವ ಕೃತ್ಯ ಹಾಗೂ ಗೂಂಡಾಗಿರಿಯನ್ನು ಒಂದೇ ದೃಷ್ಟಿಯಿಂದ ನೋಡಲಾಗದು' ಎಂದೂ ನ್ಯಾಯಪೀಠ ಹೇಳಿದೆ.
ವಿಚಾರಣೆ ವೇಳೆ ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಗೂಂಡಾಕಾಯ್ದೆ ಜಾರಿ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವುದರ ಬಗ್ಗೆ ನ್ಯಾಯಪೀಠದ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶ್ರೀಧರ್ ರಾವ್ ಅವರು ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಜನವರಿ6 ರ ಸುದ್ದಿಯನ್ನೊಮ್ಮೆ ಓದಿ: ಕುತೂಹಲದ ಸಂಗತಿಯೆಂದರೆ Goonda Act ಅಂದರೆ Karnataka Prevention of Dangerous Activities of Bootleggers, Drug Offenders, Gamblers, Goondas, Immoral Traffic Offenders and Slum Grabbers Act, 1985 ಅನುಸಾರ ರೇಪಿಸ್ಟುಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸುವಂತಿಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ರೇಪಿಸ್ಟುಗಳ ವಿರುದ್ಧದ ಈ ಗೂಂಡಾ ಪ್ರಕರಣ ಊರ್ಜಿತವಾಗದು. ಆದರೂ ಯಾವ ಪುರುಷಾರ್ಥಕ್ಕೆ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಕುತೂಹಲಕಾರಿಯಾಗಿದೆ.