ಎಫ್ಐಆರ್ :ನಿತ್ಯಾನಂದ ಸ್ವಾಮಿಗೆ ಡಬಲ್ ರಿಲೀಫ್
ಆಗ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮೀಜಿ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸಲಾಗಿದೆ. ಜತೆಗೆ, ಶಾಂತಿ ಭಂಗದ ಆರೋಪದ ಮೇಲೆ ರಾಮನಗರ ಜಿಲ್ಲಾಧಿಕಾರಿ ಹೊರಡಿಸಿದ್ದ ನಿತ್ಯಾನಂದ ಸ್ವಾಮೀಜಿ ಬಂಧನದ ಆದೇಶವನ್ನೂ ನ್ಯಾಯಪೀಠ ರದ್ದು ಪಡಿಸಿದೆ. ಆ ಸಂದರ್ಭದಲ್ಲಿ ನಿತ್ಯಾನಂದ ಕೆಲ ಕಾಲ ಮೈಸೂರು ಜೈಲಿನಲ್ಲಿ ಬಂಧಿಯಾಗಿದ್ದರು.
2012ರ ಜೂನ್ನಲ್ಲಿ ಗಲಭೆ ಪ್ರಕರಣ ಸಂಬಂಧ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ್ ನೀಡಿದ ದೂರಿನನ್ವಯ ತಮ್ಮ ವಿರುದ್ಧ ಬಿಡದಿ ಪೊಲೀಸರು ದಾಖಲಿಸಿರುವ ದೂರನ್ನು ರದ್ದು ಮಾಡುವಂತೆ ಕೋರಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಕೆಎನ್ ಕೇಶವ ನಾರಾಯಣ ಅವರು ಮಾನ್ಯ ಮಾಡಿ, ಈ ಆದೇಶ ನೀಡಿದ್ದಾರೆ.
ಬಿಡದಿ ಪೊಲೀಸರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಆಧಾರರಹಿತವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂಬುದು ಎಫ್ಐಆರ್ ರದ್ದುಗೊಳಿಸುವುದಕ್ಕೆ ನ್ಯಾ. ಕೇಶವ ನಾರಾಯಣ ಅವರು ನೀಡಿರುವ ಕಾರಣವಾಗಿದೆ.
ಬಿಡದಿ ಆಶ್ರಮದಲ್ಲಿ 2012ರ ಜೂನ್ನಲ್ಲಿ ನಡೆದಿದ್ದ ಗಲಭೆಯ ಹಿನ್ನೆಲೆಯಲ್ಲಿ ಜೀವ ಬೆದರಿಕೆ, ಹಲ್ಲೆ, ಆಶ್ರಮದಲ್ಲಿ ಕಾನೂನು ಬಾಹಿರ ಚಟುವಟಿಕೆ, ಗುಂಪುಗಾರಿಕೆ ಇನ್ನಿತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣಾ ಪೊಲೀಸರು ನಿತ್ಯಾನಂದ ಸ್ವಾಮಿ ವಿರುದ್ಧ ಜೂ.7 ರಂದು ಎಫ್ಐಆರ್ ದಾಖಲಿಸಿದ್ದರು.
ಈ ಮಧ್ಯೆ, ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಪ್ರಕರಣ ಇನ್ನೂ ಜೀವಂತವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದ ಸ್ವಾಮಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗಿದೆ.