ವಿಧಾನಸಭೆ ವಿಸರ್ಜನೆ ಕನಸು ಕಾಣಬೇಡಿ
ಸುದ್ದಿಗಾರರೊಂದಿಗೆ ಸೋಮವಾರ(ಫೆ.25) ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ 'ಕೆಲವು ಕಡೆ ಸರ್ಕಾರ ಬಿದ್ದು ಹೋಗಲಿದೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ.ವಿಧಾನಸಭೆ ವಿಸರ್ಜನೆಯಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದೆ. ಇದೆಲ್ಲ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಹುನ್ನಾರ.
ಬಿಜೆಪಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ, ಮಾತುಕತೆ ನಡೆದಿಲ್ಲ. ಈಗಾಗಲೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲವರು ಇಲ್ಲಸಲ್ಲದ ಗಾಳಿ ಸುದ್ದಿಗಳನ್ನು ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ರಾಜೀನಾಮೆ ನೀಡುತ್ತೇನೆಂದು ಹೇಳುತ್ತಿರುವವರ ಪಟ್ಟಿ ಹೆಚ್ಚಾಗಿಯೇ ಇದೆ. ಆದರೆ, ಇತ್ತೀಚೆಗೆ ಯೋಗೇಶ್ವರ್ ಹಾಗೂ ಶಂಕರಲಿಂಗೇಗೌಡರು ಬಿಟ್ಟರೆ ಬೇರೆ ಯಾರು ರಾಜೀನಾಮೆ ನೀಡಿದ್ದಾರೆ ಹೇಳಿ ಎಂದು ಮಾಧ್ಯಮದವರನ್ನು ಈಶ್ವರಪ್ಪ ಪ್ರಶ್ನಿಸಿದರು. ಎಲ್ಲಾ ಗೊಂದಲಗಳಿಗೆ ಶೀಘ್ರವೇ ತೆರೆಬೀಳಲಿವೆ. ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ರಾಜೀನಾಮೆ ಸರಣಿ ಬಗ್ಗೆ ಈಶ್ವರಪ್ಪ ಅವರು ಬೇಸರಗೊಂಡಿರುವುದು ಅವರ ಮಾತಿನಲ್ಲೇ ವ್ಯಕ್ತವಾಗುತ್ತಿತ್ತು.
ಬಿಜೆಪಿಗೆ ಗೆಲುವು: ಮುಂಬರುವ ಏಳು ಮಹಾನಗರ ಪಾಲಿಕೆಯಲ್ಲೂ ನಮ್ಮ ಬಿಜೆಪಿಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ ಮತ್ತು ನಗರಸಭೆ, ಪುರಸಭೆಗಳಲ್ಲೂ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಿಗೆ ಸರ್ಕಾರ ನೀಡಿರುವ ಆದ್ಯತೆ, ಒದಗಿಸಿರುವ ಸವಲತ್ತುಗಳು, ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಮೂಲ ಕಾರಣವಾಗಲಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರ ಬಳಿಗೆ ಹೋಗುತ್ತೇವೆ. ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಚುನಾವಣೆ ಎದುರಿಸಲಿದೆ ಎಂದರು.
ರಾಜೀನಾಮೆ ಸಲ್ಲಿಸಿದವರ ಬಗ್ಗೆ, ಕೆಜೆಪಿ ಕಡೆ ವಾಲಿರುವ ಶಾಸಕರಿಗೆ ನೋಟಿಸ್ ನೀಡಿರುವ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಈಗ ನಮ್ಮ ಗುರಿ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂಬರುವ ಅಸೆಂಬ್ಲಿ ಚುನಾವಣೆ. ಈ ಬಗ್ಗೆ ಬಿಜೆಪಿ ತನ್ನ ಕಾರ್ಯತಂತ್ರವನ್ನು ರೂಪಿಸಿದ್ದು, ಅದರಂತೆ ಹೋರಾಟ ನಡೆಸಲಿದೆ. ಯಾವುದೇ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಬಿಜೆಪಿಗೆ ಬಂದಿಲ್ಲ ಎಂದು ಈಶ್ವರಪ್ಪ ಹೇಳಿದರು.