ಜೆಡಿಎಸ್ಸಿಗೆ ಅಧಿಕಾರ ಪ್ರಾಪ್ತಿಯಾದರೆ ಏನಾಗುತ್ತೆ? Ask HDK
ನಗರ ಪ್ರದೇಶದ ಯುವಜನತೆಯನ್ನು ಗುರಿಯಾಗಿಸಿಕೊಂಡು ವೃತ್ತಿಪರವಾಗಿ ಚಾಲನೆಗೆ ತಂದಿರುವ ಈ ವೆಬ್ ಸೈಟ್ (http://jds.ind.in/ask-hdk/) ಉದ್ದೇಶಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿ ಜತೆ ಮುಕ್ತ ಸಂವಾದ ನಡೆಸುವಂತಹ Ask HDK ಜನರನ್ನು ತಲುಪಲು ಉತ್ತಮ ವೇದಿಕೆಯಾಗಿದೆ. ಹೀಗೆ ಪ್ರಶ್ನೆ ಕೇಳಲು ಬಂದವರು ಕುಮಾರಣ್ಣನ ಉತ್ತರಕ್ಕೆ ಚಿತ್ತಾಗಿ, ಪಕ್ಷ ಸೇರುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭ್ರಷ್ಟ ಆಡಳಿತ, ಮಾಲಿನ್ಯ ಸೇರಿದಂತೆ ಬೆಂಗಳೂರನ್ನು ಕಾಡುತ್ತಿರುವ ಅನೇಕಾನೇಕ ಸಮಸ್ಯೆಗಳ ಬಗ್ಗೆ ಜನ ಪ್ರಶ್ನೆ ಕೇಳತೊಡಗಿದ್ದಾರೆ. ಇದಕ್ಕೆಲ್ಲ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರೇ ಖುದ್ದಾಗಿ ಉತ್ತರ ನೀಡುತ್ತಿದ್ದಾರೆ ಎಂದು ಪಕ್ಷದ ಮಾಜಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ದರ್ಶನ್ ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಪ್ರಭುತ್ವ: ಸಾಫ್ಟ್ ವೇರ್ ಇಂಜಿನಿಯರುಗಳು ಮತ್ತು ಕಾಲ್ ಸೆಂಟರ್ ಉದ್ಯೋಗಿಗಳು ಹೆಚ್ಚು ಹೆಚ್ಚು ತಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ಜನಪರ ಕೆಲಸಗಳನ್ನು ನಗರದಲ್ಲಿರುವ ಎಲ್ಲ 28 ಕ್ಷೇತ್ರಗಳಲ್ಲೂ ಈ ಸಾಮಾಜಿಕ ಜಾಲ ತಾಣಗಳ ಮೂಲಕ ತಲುಪಲಾಗುವುದು. ಈ ಬಾರಿ ಬೆಂಗಳೂರಿನಲ್ಲಿ ಜೆಡಿಎಸ್ ತನ್ನ ಪ್ರಭುತ್ವ ಸ್ಥಾಪಿಸಲಿದೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಮಾರಸ್ವಾಮಿಯವರು ನೀಡುತ್ತಿರುವ ಪ್ರತಿಕ್ರಿಯೆಯಿಂದ ಪ್ರಭಾವಿತರಾಗಿ ವೆಬ್ ಸೈಟ್ ಆರಂಭಗೊಂಡ ಒಂದು ವಾರದಲ್ಲಿಯೇ 1,600 ಮಂದಿ ಪಕ್ಷವನ್ನು ಸೇರಿಕೊಂಡಿದ್ದಾರೆ. 15 ದಿನದಲ್ಲಿ 20,000ಕ್ಕೂ ಹೆಚ್ಚು ಮಂದಿ ಜಾಲತಾಣಕ್ಕೆ ಭೇಟಿ ನೀಡಿದ್ದಾರೆ ಎಂದು ದರ್ಶನ್ ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯದಲ್ಲೇ ಫೇಸ್ ಬುಕ್ ಮೂಲಕವೂ ಜನರನ್ನು ತಲುಪುವುದಾಗಿ ಹೇಳಿದ ಅವರು ಈ ವೇದಿಕೆಗಳ ಮೂಲಕ ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ IIT ಸ್ಥಾಪಿಸುವ ಬಗ್ಗೆ ಮಾತನಾಡಿರುವ ಎಚ್ ಡಿಕೆ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ಹಣಕಾಸು ನೆರವಿಗೆ ಕಾಯದೆ IIT ಮಾದರಿಯಲ್ಲೇ ಅದಕ್ಕಿಂತ ಉತ್ತಮವಾದ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.