ಕನ್ನಡದಲ್ಲಿ ಪ್ರಾರ್ಥಿಸಿ ಎಂದಿದ್ದಕ್ಕೆ ಪಾದ್ರಿಯಿಂದ ಹಲ್ಲೆ
ಹೆಗಡೆ ನಗರದಲ್ಲಿರುವ ಸೇಂಟ್ ಮೇರೀಸ್ ಚರ್ಚ್ನಲ್ಲಿ ತಮಿಳಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿತ್ತು. ಇದಕ್ಕೆ ಕರ್ನಾಟಕ ಕ್ಯಾಥೋಲಿಕ್ ಕ್ರಿಶ್ಚಿಯನ್ ಕನ್ನಡ ಅಸೋಸಿಯೇಷನ್ನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಇದರಿಂದ ಕುಪಿತರಾದ ಫಾದರ್ ಫ್ರಾನ್ಸಿಸ್ ಜೇಕಬ್, ಕನ್ನಡ ಕ್ಯಾಥೋಲಿಕ್ ಕ್ರಿಶ್ಚಿಯನ್ ಕನ್ನಡ ಸಂಘದ ಕಾರ್ಯದರ್ಶಿಯಾದ ರೆಫೆಲ್ ರಾಜ್ರಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ರೆಫೆಲ್ ರನ್ನು ಬಿಡಿಸಲು ಬಂದ ಸಂಘದ ಮಹಿಳೆಯ ಮೇಲೂ ಫಾದರ್ ಆಕ್ರಮಣ ಮಾಡಿದರು ಎಂದು ದೂರಲಾಗಿದೆ.
ಕನ್ನಡದಲ್ಲಿ ಪ್ರಾರ್ಥನೆ ಮಾಡಬೇಕೆಂದು ಆಗ್ರಹಿಸಿದಾಗ ಮೊದಲು ಆಕ್ರಮಣ ಮಾಡಿದ್ದು ಫ್ರಾನ್ಸಿಸ್ ಜೇಕಬ್. ಫ್ರಾನ್ಸಿಸ್ ಅವರು ರೆಫೆಲ್ ರಾಜ್ ಅವರನ್ನು ತಳ್ಳಿದಾಗ ವೇದಿಕೆಗೆ ನುಗ್ಗಿದ ಕನ್ನಡ ಸಂಘಟನೆಯ ಸದಸ್ಯರು ಪಾದ್ರಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲ್ಲೆ ನಡೆದ ನಂತರ ಸಂಪಿಗೆನಗರ ಪೊಲೀಸ್ ಠಾಣೆಗೆ ತೆರಳಿದ ಕನ್ನಡ ಸಂಘದ ಕಾರ್ಯದರ್ಶಿ ರೆಫೆಲ್ ರಾಜ್ ಅವರು ಪಾದ್ರಿಯ ವಿರುದ್ಧ ದೂರು ದಾಖಲಿಸಿದರು. ಸಂಪಿಗೆನಗರದ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಕನ್ನಡದಲ್ಲಿ ಪ್ರಾರ್ಥನೆ ಮಾಡಿ ಎಂದು ಕೇಳೋದು ತಪ್ಪಾ? ತಪ್ಪು ಎನ್ನುವುದಾದರೆ ಕನ್ನಡದ ಗಾಳಿಯನ್ನು ಉಸಿರಾಡುತ್ತಿರುವ ಇವರು ಕನ್ನಡ ನಾಡಿನಲ್ಲಿ ಇರುವುದಾದರೂ ಏತಕೆ? ಇದಕ್ಕೆ ಆರ್ಚ್ ಬಿಷಪ್ ಆಗಿರುವ ಬರ್ನಾರ್ಡ್ ಮೋರಾಸ್ ಏನು ಹೇಳುತ್ತಾರೆ? ಓದುಗರೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.